
ಮೂವರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಿದ್ದಕ್ಕೆ ಶಾಸ್ತ್ರಿ ಆಕ್ಷೇಪ
2019ರ ಏಕದಿನ ವಿಶ್ವಕಪ್ನಲ್ಲಿ ಭಾರತೀಯ ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳು ಸ್ಥಾನವನ್ನು ಪಡೆದುಕೊಂಡಿದ್ದರು. ಎಂಎಸ್ ಧೋನಿ, ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ತಂಡದಲ್ಲಿದ್ದರು. ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಕೋಚ್ ರವಿ ಶಾಸ್ತ್ರಿ ಸ್ಕ್ವಾಡ್ನಲ್ಲಿ ಮೂವರು ವಿಕೆಟ್ ಕೀಪರ್ಗಳನ್ನು ಹೊಂದುವ ಅನಿವಾರ್ಯತೆ ಏನಿತ್ತು? ಇದು ಅತ್ಯಂತ ವಿಚಿತ್ರವಾದ ಆಯ್ಕೆಯಾಗಿತ್ತು ಎಂದಿದ್ದಾರೆ. ಅಲ್ಲದೆ ಈ ಮೂವರಲ್ಲಿ ಒಬ್ಬರ ಸ್ಥಾನಕ್ಕೆ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೇಯಸ್ ಐಯ್ಯರ್ ಅಥವಾ ಅಂಬಾಟಿ ರಾಯುಡು ಇರಬೇಕಿತ್ತು
2019ರ ಏಕದಿನ ವಿಶ್ವಕಪ್ನ ಆಯ್ಕೆಯ ಗೊಂದಲದ ಬಗ್ಗೆ ರವಿ ಶಾಸತ್ರಿ ಬಳಿ ಅಭಿಪ್ರಾಯ ಕೇಳಿದಾಗ ಟೀಮ್ ಇಂಡಿಯಾದ ಸ್ಕ್ವಾಡ್ನಲ್ಲಿ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಐಯ್ಯರ್ ಇರಲೇಬೇಕಿತ್ತು ಎಂದಿದ್ದಾರೆ. "ನಾನು ಆ ಆಯ್ಕೆಯ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ ಮೂವರು ವಿಕೆಟ್ ಕೀಪರ್ಗಳು ವಿಶ್ವಕಪ್ ತಂಡದಲ್ಲಿ ಇರುವುದಕ್ಕೆ ಸಮ್ಮತಿ ಇರಲಿಲ್ಲ. ಅಂಬಾಟಿ ಅಥವಾ ಶ್ರೇಯಸ್ ತಂಡದಲ್ಲಿರಬೇಕಾಗಿತ್ತು. ಎಂಎಸ್ ಧೋನಿ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಂದೇ ತಂಡದಲ್ಲಿ ಆಯ್ಕೆ ಮಾಡುವುದರ ಹಿಂದೆ ಯಾವ ಲಾಜಿಕ್ ಇದೆ?" ಎಂದು ರವಿ ಶಾಸ್ತ್ರಿ ಪ್ರಶ್ನಿಸಿದ್ದಾರೆ.

ಮಧ್ಯ ಪ್ರವೇಶ ಮಾಡಿಲ್ಲ
ಮುಂದುವರಿದು ಮಾತನಾಡಿದ ರವಿ ಶಾಸ್ತ್ರಿ "ನಾನು ಯಾವತ್ತಿಗೂ ಆಯ್ಕೆಗಾರರ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡಿಲ್ಲ. ನನ್ನ ಅಭಿಪ್ರಾಯವನ್ನು ಕೇಳುವ ಅಥವಾ ಸಾಮಾನ್ಯ ಚರ್ಚೆಯನ್ನು ಹೊರತು ಪಡಿಸಿ ನಾನು ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಸೆಮಿಫೈನಲ್ನಲ್ಲಿ ಆಘಾತಕಾರಿಯಾಗಿ ಸೋಲು ಕಂಡ ಭಾರತ
ಇನ್ನು 2019ರ ಏಕದಿನ ವಿಶ್ವಕಪ್ನಲ್ಲಿ ಭಾರತ ಅದ್ಭುತವಾದ ಪ್ರದರ್ಶನ ನೀಡಿತ್ತು, ಆದರೆ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಘಾತಕಾರಿಯಾಗಿ ಸೋಲು ಕಂಡು ಹೊರಬಿದ್ದಿತ್ತು. ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 240 ರನ್ಗಳ ಸಾಮಾನ್ಯ ಗುರಿಯನ್ನು ನೀಡಿತ್ತು. ಆದರೆ ಭಾರತ 24 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರೀ ಕುಸಿತವನ್ನು ಕಂಡಿತು. ಆದರೆ ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಭಾರತ ಉತ್ತಮ ಹೋರಾಟವನ್ನು ಪ್ರದರ್ಶಿಸಿತು. ಈ ಇಬ್ಬರು ಕೂಡ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ 18 ರನ್ಗಳ ಅಂತರದಿಂದ ಭಾರತ ಈ ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಮೂಲಕ ವಿಶ್ವಕಪ್ ಹೋರಾಟವನ್ನು ಸೆಮಿಫೈನಲ್ಗೆ ಅಂತ್ಯಗೊಳಿಸಿತು.


Click it and Unblock the Notifications












