
ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ವೇಗಿ, ಈಗ ವೆಸ್ಟ್ ಬೆಂಗಾಲ್ನ ಪುರ್ಬಾ ಮೇದಿನಿಪುರ್ನ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್ ದಿಂಡಾ ಮೇಲೆ ಅಪರಿಚಿತರು ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಮಂಗಳವಾರ (ಮಾರ್ಚ್ 30) ಚುನಾವಣಾ ಪ್ರಚಾರದಲ್ಲಿದ್ದಾಗ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅಶೋಕ್ ದಿಂಡಾ ಅವರು SUV ಜೀಪಿನಲ್ಲಿ ವಾಪಸ್ಸಾಗುತ್ತಿದ್ದರು. ಸಂಜೆ 4.30 pm ವೇಳೆ ವೆಲ್ಡಿಂಗ್ ಲಾಠಿ, ರಾಡ್ ಗಳನ್ನು ಹಿಡಿದು ಬಂದ ನೂರಾರು ಗೂಂಡಾಗಳು ದಂಡಾ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಿರುವುದಾಗಿ ಅವರ ಮ್ಯಾನೇಜರ್ ಹೇಳಿದ್ದಾರೆ.
ದಾಳಿಗೆ ಬಂದವರು ನೂರಾರು ಕಲ್ಲುಗಳನ್ನೂ ಎಸೆದಿದ್ದಾರೆ. ಅವರ ದಾಳಿಯಿಂದ ಮಾಜಿ ಕ್ರಿಕೆಟಿಗ ದಿಂಡಾ ಅವರ ಭುಜಕ್ಕೆ ಗಾಯವಾಗಿದೆ ಎಂದು ದಿಂಡಾ ಮ್ಯಾನೇಜರ್ ಹೇಳಿದ್ದಾರೆ. 'ನಾವು ರೋಡ್ಶೋನಿಂದ ವಾಪಸ್ಸಾಗುತ್ತಿದ್ದಾಗ ಸರಿಯಾಗಿ ಮೋಯ್ನ ಬಝಾರ್ ಬಳಿ ಈ ಘಟನೆ ನಡೆದಿದೆ,' ಎಂದು ಮ್ಯಾನೇಜರ್ ಪಿಟಿಐಗೆ ಹೇಳಿದ್ದಾರೆ.
37ರ ಹರೆಯದ ಅಶೋಕ್ ದಿಂಡಾ ಭಾರತದ ಪರವಾಗಿ 13 ಏಕದಿನ ಪಂದ್ಯಗಳು, 9 ಟಿ20ಐ ಪಂದ್ಯಗಳು ಆಡಿದ್ದಾರೆ. ಮಧ್ಯಮ ವೇಗಿಯಾಗಿದ್ದ ದಿಂಡಾ ಏಕದಿನದಲ್ಲಿ 12 ವಿಕೆಟ್, ಟಿ20ಐನಲ್ಲಿ 17 ವಿಕೆಟ್ ಪಡೆದಿದ್ದಾರೆ. 78 ಐಪಿಎಲ್ ಪಂದ್ಯಗಳನ್ನಾಡಿರುವ ದಿಂಡಾ, ಕೆಕೆಆರ್, ಆರ್ಸಿಬಿ, ರೈಸಿಂಗ್ ಪುಣೆ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು.