
ಕರ್ನಾಟಕದ ಹಿರಿಯ ಕ್ರಿಕೆಟಿಗ ಗೋಪಾಲಸ್ವಾಮಿ ಕಸ್ತೂರಿ ರಂಗನ್ ಅವರು ಬುಧವಾರ ಮುಂಜಾನೆ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ವಕ್ತಾರ ವಿನಯ ಮೃತ್ಯುಂಜಯ ಪಿಟಿಐಗೆ ಮಾಹಿತಿಯನ್ನು ನೀಡಿದ್ದಾರೆ.
ಕಸ್ತೂರಿ ರಂಗನ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಕ್ರಿಕೆಟಿಗನಾಗಿ ಮಾತ್ರವಲ್ಲದೆ ಕ್ರಿಕೆಟ್ ನಿರ್ವಾಹಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ಬಿಸಿಸಿಐನ ಪಿಚ್ ಕ್ಯುರೇಟರ್ ಆಗಿ ಸಾಕಷ್ಟು ಖ್ಯಾತಿಯನ್ನು ಹೊಂದಿದ್ದರು ಗೋಪಾಲಸ್ವಾಮಿ ಕಸ್ತೂರಿ ರಂಗನ್.
ರಣಜಿಯಲ್ಲಿ ಕಸ್ತೂರಿ ರಂಗನ್ ಅವರು ತಮ್ಮ ಹೆಚ್ಚಿನ ಆಟವನ್ನು ಮೈಸುರು ಪರವಾಗಿ ಆಡಿದ್ದಾರೆ. 1948 ರಿಂದ 1963ರ ಅವಧಿಯಲ್ಲಿ ಕಸ್ತೂರಿ ರಂಗನ್ ಅವರು ಮೈಸೂರು ತಂಡದ ಪ್ರಮುಖ ಬಲಗೈ ವೇಗದ ಬೌಲರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕಸ್ತೂರಿ ರಂಗನ್ ಅವರ ನಿಧನಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಟ್ವೀಟ್ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕಸ್ತೂರಿ ರಂಗನ್ ಅವರ ನಿಧನದ ಬಗ್ಗೆ ಕೇಳಿ ಬೇಸರವಾಗಿದೆ. ಕ್ರಿಕೆಟ್ಗೆ ಅವರು ನೀಡಿದ ಎಲ್ಲ ಕೊಡುಗೆಗಳನ್ನು ಪ್ರೀತಿಯಿಂದ ಸ್ಮರಿಸುತ್ತೇನೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ರಣಜಿ ಕ್ರಿಕೆಟಿಗ, ಕೆಎಸ್ಸಿಎ ಉಪಾಧ್ಯಕ್ಷ ಮತ್ತು ಬಿಸಿಸಿಐ ಕ್ಯುರೇಟರ್ ಶ್ರೀ ಜಿ ಕಸ್ತೂರಿ ರಂಗನ್ ಹಠಾತ್ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸಂತಾಪ ಸಂದೇಶದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.