ಸದ್ಯ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮುಕ್ತಾಯದ ಐದು ದಿನಗಳ ನಂತರ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ.
ಇದೇ ವೇಳೆ ಮತ್ತೊಂದು ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ ಆಯ್ಕೆ ಕುರಿತು ಎಲ್ಲೆಡೆ ಮಾತುಗಳು ಶುರುವಾಗಿವೆ. ಏಪ್ರಿಲ್ ಅಂತ್ಯದಲ್ಲಿ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದೀಗ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡದ ಬೌಲರ್ಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಯುವ ಬೌಲರ್ ಅಚ್ಚರಿಯಾಗಿ ಸ್ಥಾನ ಪಡೆದಿದ್ದಾರೆ.
ಹೌದು, ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡದ ಯುವ ವೇಗಿ ಮಯಾಂಕ್ ಯಾದವ್ ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕಾಗಿ ಆಡಲು ಸಿದ್ಧರಾಗಿದ್ದಾರೆ ಎಂದು ಭಾರತದ ಮಾಜಿ ಬ್ಯಾಟರ್ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಮೂಲದ ವೇಗಿ ಮಯಾಂಕ್ ಯಾದವ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮೂವರು ಬ್ಯಾಟರ್ಗಳನ್ನು ತಮ್ಮ ಎಕ್ಸ್ಪ್ರೆಸ್ ವೇಗದೊಂದಿಗೆ ಔಟ್ ಮಾಡಿದ ನಂತರ ಮನೋಜ್ ತಿವಾರಿ ಅವರಿಂದ ಈ ಹೇಳಿಕೆ ಬಂದಿದೆ.
ಮಯಾಂಕ್ ಯಾದವ್ ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಗಂಟೆಗೆ 156.7 ಕಿಲೋಮೀಟರ್ ಎಸೆತ ಎಸೆದರು ಮತ್ತು ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡಿದರು. ಮಯಾಂಕ್ ಯಾದವ್ ಇಡೀ ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ಒಟ್ಟಾರೆ ನಾಲ್ಕನೇ ವೇಗದ ಎಸೆತವನ್ನು ಎಸೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ತಮ್ಮ ಮೊದಲ ಎರಡು ಐಪಿಎಲ್ ಪಂದ್ಯಗಳಲ್ಲಿ ಮಯಾಂಕ್ ಯಾದವ್ ಕೇವಲ 41 ರನ್ಗಳನ್ನು ಬಿಟ್ಟು ಆರು ವಿಕೆಟ್ಗಳನ್ನು ಕಬಳಿಸಿದ್ದಾರೆ.
ಆರ್ಸಿಬಿ ಮತ್ತು ಎಲ್ಎಸ್ಜಿ ನಡುವಿನ ಪಂದ್ಯದ ನಂತರ ಮಾತನಾಡಿದ ಮನೋಜ್ ತಿವಾರಿ ತಾವು ಆಯ್ಕೆಗಾರರಾಗಿದ್ದರೆ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬಳಿಕ ಮಯಾಂಕ್ ಯಾದವ್ರನ್ನು ಭಾರತ ತಂಡದ ಮೂರನೇ ಆಯ್ಕೆಯ ವೇಗಿಯಾಗಿ ಆಯ್ಕೆ ಮಾಡುವುದಾಗಿ ಹೇಳಿದರು.
"ನಾನು ಅಜಿತ್ ಅಗರ್ಕರ್ ಅವರ ಸ್ಥಾನದಲ್ಲಿದ್ದರೆ ಟಿ20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ನಂತರ ಮಯಾಂಕ್ ಯಾದವ್ ಅವರನ್ನು ಸೇರಿಸುತ್ತೇನೆ. ಮಯಾಂಕ್ ಅವರ ಫಾರ್ಮ್, ಆಕ್ಷನ್ ಮತ್ತು ಬಾಲ್ ಡೆಲೆವರಿ ನೋಡಿದರೆ ಅವರು ನಿಯಂತ್ರಣದಲ್ಲಿದ್ದಾರೆ ಮತ್ತು ನೀವು ಅವರಿಗೆ ದೊಡ್ಡ ವೇದಿಕೆಯನ್ನು ನೀಡಿದರೆ, ಆತ ಇನ್ನೂ ಅತ್ಯುತ್ತಮ ಡೆಲಿವರಿ ಮಾಡುತ್ತಾನೆ ಎಂದು ಅನಿಸುತ್ತದೆ," ಎಂದು ಮನೋಜ್ ತಿವಾರಿ ತಿಳಿಸಿದರು.
ಇನ್ನು ಇದೇ ವೇಳೆ ಚರ್ಚೆಯ ಭಾಗವಾಗಿದ್ದ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಕೂಡ ಮಯಾಂಕ್ ಯಾದವ್ ಅವರು ಫಿಟ್ ಆಗಿದ್ದರೆ ಮಾತ್ರ, ಐಪಿಎಲ್ ನಂತರ ಭಾರತ ತಂಡಕ್ಕಾಗಿ ಆಡಬಹುದು ಎಂಬ ಅಭಿಲಾಷೆ ವ್ಯಕ್ತಪಡಿಸಿದರು.
"ಮಯಾಂಕ್ ಯಾದವ್ ಮತ್ತು ಉಮ್ರಾನ್ ಮಲಿಕ್ ನಡುವಿನ ವ್ಯತ್ಯಾಸವೆಂದರೆ, ಮಯಾಂಕ್ ಲೈನ್ ಎಸೆತಗಳು ನಿಖರವಾಗಿವೆ. ಉಮ್ರಾನ್ ಮಲಿಕ್ ಕೂಡ ವೇಗಿಯಾಗಿದ್ದಾರೆ. ಆದರೆ ಅವರ ಲೈನ್ ಮತ್ತು ಲೆಂತ್ ಅನ್ನು ಸುಧಾರಿಸಲು ಸಾಧ್ಯವಾಗಲಿಲ್ಲ. ಮಯಾಂಕ್ ಲೈನ್ ಮತ್ತು ಲೆಂತ್ ನಿಖರವಾಗಿವೆ," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
"ಮಯಾಂಕ್ ಯಾದವ್ ವೇಗವಾಗಿ ಬೌಲಿಂಗ್ ಮಾಡುತ್ತೇನೆ ಎಂದು ಚೆನ್ನಾಗಿ ತಿಳಿದಿದ್ದಾನೆ. ಆದರೆ ನನ್ನ ಲೈನ್ ತಪ್ಪಾಗಿದ್ದರೆ ನಾನು ಬೌಂಡರಿಗಳನ್ನು ಹೊಡೆಸಿಕೊಳ್ಳಬಹುದು. ಅದಕ್ಕಾಗಿಯೇ ಐಪಿಎಲ್ ನಂತರ ಅವರು ಫಿಟ್ ಆಗಿ ಉಳಿದರೆ, ಭಾರತಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕು ಎಂದು ನಾನು ಭಾವಿಸುತ್ತೇನೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ 14 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಗಮನಾರ್ಹ ಅಂಕಿಅಂಶ ಗಳಿಸಿದರು. ಇದು ಅವರ ಸತತ ಎರಡನೇ ಬಾರಿಗೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಕಾರಣವಾಯಿತು.
ಮಾಯಾಂಕ್ ನಿರಂತರವಾಗಿ 150 kmph ಮಾರ್ಕ್ ಅನ್ನು ಉಲ್ಲಂಘಿಸುವ ಖ್ಯಾತಿಯನ್ನು ಸ್ಥಾಪಿಸಿದ್ದಾರೆ. 151 kmph ಎಸೆತವು ಗ್ಲೆನ್ ಮ್ಯಾಕ್ಸ್ವೆಲ್ರನ್ನು ಔಟ್ ಮಾಡಿತು. ಒಟ್ಟಾರೆ ಯುವ ವೇಗಿ ಮಯಾಂಕ್ ಯಾದವ್ ಸದ್ಯ ತನ್ನ ಅತಿ ವೇಗದ ಬೌಲಿಂಗ್ನಿಂದ ಸದ್ದು ಮಾಡುತ್ತಿದ್ದಾರೆ.