ಭಾರತ ಕ್ರಿಕೆಟ್ ಕೋಚ್ ಹುದ್ದೆಗೆ ಟವಲ್ ಹಾಕಿದ ವೆಂಕಿ
ಬೆಂಗಳೂರು, ಜೂನ್ 29 : ಕ್ರಿಕೆಟ್ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ಬಿಸಾಕುತ್ತಿದ್ದಂತೆ, ಹಲವಾರು ಜನರು ಈ ಪ್ರತಿಷ್ಠಿತ ಹುದ್ದೆಗೆ ಅರ್ಜಿ ಗುಜರಾಯಿಸುತ್ತಿದ್ದಾರೆ. ಇದೀಗ ತೇಲಿಬಂದಿರುವ ಹೊಸ ಹೆಸರು 'ವೆಂಕಟೇಶ್ ಪ್ರಸಾದ್'!
ಭಾರತ ಟೆಸ್ಟ್ ತಂಡದ ಮಾಜಿ ಬೌಲಿಂಗ್ ಕೋಚ್ ಆಗಿರುವ ಇವರು, ಅನಿಲ್ ಕುಂಬ್ಳೆಯ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಯನ್ನು ಅಲಂಕರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, 47 ವರ್ಷದ ಮಾಜಿ ವೇಗದ ಬೌಲರ್ ಅರ್ಜಿಯನ್ನೂ ಕಳಿಸಿದ್ದಾರೆ.

ಈಗಾಗಲೆ ಈ ಹುದ್ದೆಗೆ ಹಲವಾರು ಹೆಸರುಗಳು ಕೇಳಿಬಂದಿವೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಲಾಲ್ ಚಂದ್ರ ರಜಪೂತ್, ದೊಡ್ಡ ಗಣೇಶ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಶ್ರೀಲಂಕಾದ ಮಹೇಲ ಜಯವರ್ಧನೆಯವರೂ ಕಾತುರದಿಂದಿದ್ದಾರೆ.
ಭಾರತದ ಪರ 33 ಟೆಸ್ಟ್, 162 ಏಕದಿನ ಪಂದ್ಯಗಳನ್ನು ಆಡಿರುವ ವೆಂಕಟೇಶ್ ಪ್ರಸಾದ್ ಅವರು, ಪ್ರಸ್ತುತ ಭಾರತದ ಜ್ಯೂನಿಯರ್ ಕ್ರಿಕೆಟ್ ಆಯ್ಕೆ ಮಂಡಳಿಯ ಪ್ರಮುಖ ಆಯ್ಕೆದಾರರಾಗಿದ್ದಾರೆ. ಅವರ ಅವಧಿ ಇದೇ ಸೆಪ್ಟೆಂಬರ್ ಗೆ ಮುಗಿಯಲಿದೆ.
ರವಿ ಶಾಸ್ತ್ರಿ ಕೂಡ ಅರ್ಜಿ ಸಲ್ಲಿಸಿದ್ದಾರೆ
ಈ ನಡುವೆ, ರವಿ ಶಾಸ್ತ್ರಿ ಅವರು ಕೂಡ ಪ್ರಮುಖ ಕೋಚ್ ಹುದ್ದೆಗೆ ಅರ್ಜಿ ಗುಜರಾಯಿಸಿದ್ದಾರೆ. ಹಿಂದೆ ಅಲ್ಪಕಾಲಕ್ಕೆ ಕ್ರಿಕೆಟ್ ತಂಡದ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾಗ ಅವರನ್ನು ಚೆನ್ನಾಗಿ ನಡೆಸಿಕೊಂಡಿರಲಿಲ್ಲ. ಹೀಗಾಗಿ ಅವರು ಹಿಂದೇಟು ಹಾಕಿದ್ದರು. ಆದರೆ, ಮನಸ್ಸು ಬದಲಿಸಿರುವ ಅವರು ಕೋಚ್ ಆಗಲು ತಯಾರಾಗಿದ್ದಾರೆ.
ಕುಂಬ್ಳೆಯವರನ್ನು ಕೆಳಗಿಳಿಸುವಲ್ಲಿ ಭಾರತದ ಅತ್ಯುನ್ನತ ಮಾಜಿ ಕ್ರಿಕೆಟ್ ಆಟಗಾರರೊಬ್ಬರ ಕೈವಾಡವಿದೆ ಎಂಬ ಮಾತು ಕೂಡ ಕೇಳಿಬಂದಿದೆ. ರವಿ ಶಾಸ್ತ್ರಿಯವರನ್ನು ಕೋಚ್ ಮಾಡುವ ಉದ್ದೇಶದಿಂದ ಅನಿಲ್ ಕುಂಬ್ಳೆಯವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂಬ ಗಾಳಿಸುದ್ದಿಗಳೂ ಹರಿದಾಡುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications