
ಮುಂಬೈ: ಏಪ್ರಿಲ್ 19ರ ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್ಕೆ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಸಿಎಸ್ಕೆ ಆಲ್ ರೌಂಡರ್ ಡ್ರೇನ್ ಬ್ರಾವೋ ನಡೆಗೆ ಭಾರತದ ಮಾಜಿ ಕ್ರಿಕೆಟರ್, ಕನ್ನಡಿಗ ವೆಂಕಟೇಶ್ ಪ್ರಸಾದ್ ಅಸಮಾಧಾನ ತೋರಿಕೊಂಡಿದ್ದಾರೆ.
ಸೋಮವಾರದ ಪಂದ್ಯದಲ್ಲಿ ಸಿಎಸ್ಕೆ ಬ್ಯಾಟ್ಸ್ಮನ್ ಡ್ವೇನ್ ಬ್ರಾವೋ ಬೌಲಿಂಗ್ ಮಾಡೋಕೂ ಮೊದಲೇ ರನ್ ಗಾಗಿ ಮುಂದೆ ಹೋಗಿದ್ದರು. ಆದರೆ ಬೌಲರ್ ಮುಸ್ತಫಿಝುರ್ ರಹ್ಮಾನ್ ರನ್ ಔಟ್ ಏನೂ ಮಾಡಿಲ್ಲ. ಆದರೆ ಬ್ರಾವೋ ಈ ನಡೆಗೆ ವೆಂಕಟೇಶ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದಿದ್ದು ಸಿಎಸ್ಕೆ ಇನ್ನಿಂಗ್ಸ್ನ ಕೊನೇ ಓವರ್ನಲ್ಲಿ. ಆಗ ಸ್ಟ್ರೈಕ್ನಲ್ಲಿ ಶಾರ್ದೂಲ್ ಠಾಕೂರ್ ಇದ್ದರೆ, ನಾನ್ ಸ್ಟ್ರೈಕ್ನಲ್ಲಿ ಡ್ವೇನ್ ಬ್ರಾವೋ ಇದ್ದರು. ಮುಸ್ತಾಫಿಝುರ್ ಬೌಲಿಂಗ್ ಮಾಡುವಾಗ ಬ್ರಾವೋ ಸಾಕಷ್ಟು ಮುಂದೆ ಚಲಿಸಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಅದೇ ಎಸೆತಕ್ಕೆ ಇತ್ತ ಮುಸ್ತಫಿಝುರ್ಗೆ ನೋ ಬಾಲ್ ನೀಡಲಾಗಿತ್ತು. ಇದರ ಸ್ಕ್ರೀನ್ಶಾಟ್ ಬಳಸಿ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
'ಕೆಲವು ಇಂಚುಗಳಷ್ಟು ಮುಂದೆ ಹೆಜ್ಜೆಯಿಟ್ಟರೂ ಬೌಲರ್ಗೆ ದಂಡಿಸಲಾಗುತ್ತದೆ. ಆದರೆ ಬೌಲಿಂಗ್ಗೆ ಮುನ್ನವೇ ಬ್ಯಾಟ್ಸ್ಮನ್ ಮುಂದೆ ಹೋದರೆ ಅವರಿಗೆ ದಂಡನೆಯಿಲ್ಲ. ಇಂಥ ಸಂದರ್ಭ ಬೌಲರ್ಗಳಿಗೆ ಬ್ಯಾಟ್ಸ್ಮನ್ನನ್ನು ರನ್ಔಟ್ ಮಾಡುವ ಅವಕಾಶವಿದೆ. ಆದರೆ ಹಾಗೆ ಮಾಡಿದರೆ ಅದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎನ್ನಲಾಗುತ್ತದೆ' ಎಂದು ಪ್ರಸಾದ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.