
ಐಸಿಸಿ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ರೋಹಿತ್ ಶರ್ಮಾ ಅವರ ಪುರುಷರು ಜೋಸ್ ಬಟ್ಲರ್ ಅವರ ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ಮೊದಲು ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿಲ್ಲ ಎಂದು ಹುಸೇನ್ ದಿ ಡೈಲಿ ಮೇಲ್ನಲ್ಲಿ ತಮ್ಮ ಅಂಕಣದಲ್ಲಿ ಹೇಳಿಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ಭಾರತ ತಂಡದ ಜೊತೆ ಮೈಂಡ್ಗೇಮ್ ಆಡಲು ಮುಂದಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಒಂದು ಕಡೆ ಇಂಗ್ಲೆಂಡ್ ಆಟಗಾರರು ಭಾರತದ ಕ್ರಿಕೆಟಿಗರನ್ನು, ಭಾರತ ತಂಡವನ್ನು ಬಲಿಷ್ಠ ಎಂದು ಹೊಗಳುತ್ತಿದ್ದರೆ ಮತ್ತೊಂದು ಕಡೆ ಅದೇ ತಂಡದ ಮಾಜಿ ನಾಯಕ ವ್ಯತಿರಿಕ್ತ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ 2013 ರ ಚಾಂಪಿಯನ್ಸ್ ಟ್ರೋಫಿಯಿಂದ ಭಾರತವು ಯಾವುದೇ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ.
2014ರ ಟಿ20 ವಿಶ್ವಕಪ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಭಾರತ ತಂಡ ಸೋಲನುಭವಿಸಿತ್ತು. 2015ರ ವಿಶ್ವಕಪ್, 2016ರ ಟಿ20 ವಿಶ್ವಕಪ್ ಮತ್ತು 2019ರ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. 2021ರಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿತ್ತು. ಟೀಂ ಇಂಡಿಯಾ ಸೆಮಿಫೈನಲ್ ತಲುಪುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದ್ದರು.

ದಿನೇಶ್ ಕಾರ್ತಿಕ್ ಬದಲು ಪಂತ್ಗೆ ಅವಕಾಶ ಕೊಡಿ
"ಅವರು ವಿಶ್ವ ಟೂರ್ನಮೆಂಟ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಕೆಲವೊಮ್ಮೆ ತಂಡದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೆಲವು ಆಟಗಾರರು ಬ್ಯಾಟಿಂಗ್ನಲ್ಲಿ ಕಡಿಮೆ ಸ್ಟ್ರೈಕ್ ಹೊಂದಿದ್ದಾರೆ ಇದನ್ನು ಬದಲಾಯಿಸಬೇಕಾಗಿದೆ ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೊಂಡಿದ್ದರು" ಎಂದು ಅವರು ಹೇಳಿದ್ದಾರೆ.
ಭಾರತದ ಇನ್-ಫಾರ್ಮ್ ಬ್ಯಾಟಿಂಗ್ ಜೋಡಿಯ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಶ್ಲಾಘಿಸುವುದರ ಜೊತೆಗೆ, ಹುಸೇನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ರನ್ನು ಆಯ್ಕೆ ಮಾಡಿದರು.
"ಭಾರತವು ದಿನೇಶ್ ಕಾರ್ತಿಕ್ ಅನ್ನು ತಮ್ಮ ಫಿನಿಶರ್ ಆಗಿ ಬಳಸುತ್ತಿತ್ತು ಆದರೆ ಭಾನುವಾರದಂದು ಭಾರತದ ಅಂತಿಮ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ರಿಷಬ್ ಪಂತ್ ಕಣಕ್ಕಿಳಿದರು, ಆತ ವಿಲಕ್ಷಣ ಆಟಗಾರ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದು ಕತೂಹಲಕಾರಿಯಾಗಿದೆ" ಎಂದು ಅವರು ಹೇಳಿದ್ದಾರೆ.