
ಭಾರತ ಹಾಗೂ ಇಂಗ್ಲೆಂಡ್ ಮಹಿಳೆಯರ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಇಂಗ್ಲೆಂಡ್ ನೆಲದಲ್ಲಿ ಏಕದಿನ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ ಭಾರತ. ಲಾರ್ಡ್ಸ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡದ 9 ವಿಕೆಟ್ಗಳನ್ನು ಪಡೆದುಕೊಂಡಿದ್ದರೂ ಚಾರ್ಲೀ ಡೀನ್ ಏಕಾಂಗಿ ಹೋರಾಟ ನಡೆಸಿ ಬಹುತೇಕ ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಆದರೆ ಈ ಸಂದರ್ಭದಲ್ಲಿ ನಾನ್ಸ್ಟ್ರೈಕರ್ ತುದಿಯಲ್ಲಿ ಭಾರತದ ಬೌಲರ್ ದೀಪ್ತಿ ಶರ್ಮಾ ಚಾಣಾಕ್ಷತನದಿಂದ ರನೌಟ್ ಮಾಡಿದ ಕಾರಣದಿಂದಾಗಿ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಆದರೆ ಚಾರ್ಲೀ ಡೀನ್ ಅದ್ಭುತ ಹೋರಾಟ ನಡೆಸಿದ ಬಳಿಕ ಗೆಲುವು ಸಾಧಿಸಲು ಸಾಧ್ಯವಾಗದ ಕಾರಣ ಕಣ್ಣೀರಿಡುತ್ತಾ ಫೆವಿಲಿಯನ್ಗೆ ಹೆಜ್ಜೆ ಹಾಕಿದ್ದರು. ಈ ರನೌಟ್ ವಿಚಾರವಾಗಿ ಸಾಕಷ್ಟು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ಐಸಿಸಿ ನಿಯಮದಲ್ಲಿರುವ ಕಾರಣ ದೀಪ್ತಿ ಶರ್ಮಾ ಅವರ ಈ ನಡೆಯನ್ನು ಸಮರ್ಥಿಸಿಕೊಂಡಿದ್ದರೆ ಕೆಲವರು ಮಾತ್ರ ಈ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಕೂಡ ಈ ಚರ್ಚೆಯಲ್ಲಿ ಭಾಗಿಯಾಗಿದ್ದು ಬ್ಯಾಟರ್ಗಳಿಗೆ ಮಾಂಟಿ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಮಾಂಟಿ ಪೆನೆಸರ್ ಐಪಿಎಲ್ನಲ್ಲಿ ಎಂಎಸ್ ಧೋನಿಯ ಹಳೇಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೌಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಬೌಲರ್ ಬೌಲಿಂಗ್ ಆಕ್ಷನ್ ಸಂಪೂರ್ಣಗೊಳಿಸುವವರಿಗೂ ಧೋನಿ ಕ್ರೀಸ್ನಲ್ಲಿಯೇ ಇರುವ ವಿಡಿಯೋ ಇದಾಗಿದ್ದು ಬ್ಯಾಟರ್ಗಳು ನಾನ್ಸ್ಟ್ರೈಕರ್ ತುದಿಯಲ್ಲಿ ಈ ರೀತಿಯಾಗಿ ಬ್ಯಾಟ್ ಕ್ರೀಸ್ನಲ್ಲಿ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದ್ದಾರೆ.
ರನೌಟ್ ಬಗ್ಗೆ ಪ್ರಶ್ನಿಸಿದ ನಿರೂಪಕನಿಗೆ ತಿರುಗೇಟು ನೀಡಿದ ಹರ್ಮನ್: ಇನ್ನು ಒಂದ್ಯದ ಮುಕ್ತಾಯದ ಬಳಿಕ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ಗೆ ಪ್ರಶ್ನೆ ಮಾಡಿದಾಗ ದೀಪ್ತಿ ಶರ್ಮಾ ಮಾಡಿದ ರನೌಟ್ಅನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಆ ರನೌಟ್ ಬಗ್ಗೆ ಪ್ರಶ್ನೆ ಕೇಳಿದ ಕಾಮೆಂಟೇಟರ್ಗೆ ತಮ್ಮದೇ ದಾಟಿಯಲ್ಲಿ ಚಾಟಿ ಬೀಸಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಪಡೆದುಕೊಂಡ ಎಲ್ಲಾ 10 ವಿಕೆಟ್ಗಳ ಬಗ್ಗೆಯೂ ನೀವು ಪ್ರಶ್ನೆ ಕೇಳುತ್ತೀರಿ ಎಂದು ಭಾವಿಸಿದ್ದೆ ಯಾಕೆಂದರೆ ಅದ್ಯಾವುದೂ ಸುಲಭದ್ದಾಗಿರಲಿಲ್ಲ. ಇದು ಆಟದ ಒಂದು ಭಾಗವಾಗಿದ್ದು ನಾವು ವಿಭಿನ್ನವಾಗಿ ಏನೂ ಮಾಡಿದ್ದೇವೆ ಎನಿಸುತ್ತಿಲ್ಲ. ಇದು ಬ್ಯಾಟರ್ಗಳು ಏನು ಮಾಡುತ್ತಿದ್ದಾರೆ ಎಂದು ನಮ್ಮಲ್ಲಿರುವ ಅರಿವನ್ನು ತೋರಿಸುತ್ತದೆ. ನಾನು ನನ್ನ ಆಟಗಾರ್ತಿಯರನ್ನು ಬೆಂಬಲಿಸುತ್ತೇನೆ. ಆಟದ ನಿಯಮಗಳಿಗೆ ವಿರುದ್ಧವಾಗಿ ನಾವು ಏನೂ ಮಾಡಿಲ್ಲ. ಇದು ಆಟದ ನಿಯಮದಲ್ಲಿಯೇ ಇದೆ. ಅಗತ್ಯ ಬಂದಾಗ ನಾವು ಇದನ್ನು ಮುಂದೆಯೂ ಮಾಡುತ್ತೇವೆ" ಎಂದಿದ್ದಾರೆ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್
ಜೂಲನ್ ಗೋಸ್ವಾಮಿಯ ಅಂತಿಮ ಪಂದ್ಯ: ಇನ್ನು ಲಾರ್ಡ್ಸ್ ಅಂಗಳದಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯ ಟೀಮ್ ಇಂಡಿಯಾದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರ ಅಂತಿಮ ಪಂದ್ಯವಾಗಿತ್ತು. ಈ ಪಂದ್ಯದ ಮೂಲಕ ಭಾರತದ ಹಿರಿಯ ಆಟಗಾರ್ತಿ ಸುದೀರ್ಘ ಕಾಲದ ವೃತ್ತಿ ಜೀವನಕ್ಕೆ ವಿದಾಯವನ್ನು ಘೋಷಿಸಿದರು. ಈ ಸರಣಿಯನ್ನು ಭಾರತ 3-0 ಮೂಲಕ ವೈಟ್ವಾಶ್ ಮಾಡಿ ಸರಣಿ ವಶಕ್ಕೆ ಪಡೆಯುವ ಮೂಲಕ ಭಾರತ ತಂಡ ವಿಶೇಷವಾಗಿ ವಿದಾಯ ಹೇಳಿದೆ.