
ನವದೆಹಲಿ: ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಕಪಿಲ್ ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು.
ತಾನೀಗ ಸಂಪೂರ್ಣ ಗುಣಮುಖವಾಗಿರುವುದಾಗಿ ಕಪಿಲ್ ದೇವ್ ಅವರೇ ಹೇಳಿಕೊಂಡಿದ್ದಾರೆ. ನನ್ನ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಟ್ವಿಟರ್ ಮೂಲಕ ಕಪಿಲ್ ಹೇಳಿದ್ದಾರೆ. ಕಳೆದ ಅಕ್ಟೋಬರ್ 23ರಂದು ಎದೆ ನೋವಿಗೆ ತುತ್ತಾಗಿದ್ದ ಕಪಿಲ್ ಆ್ಯಂಜಿಯೋಪ್ಲ್ಯಾಸ್ಟಿ ಬಳಿಕ ಅಕ್ಟೋಬರ್ 25ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಶುಕ್ರವಾರ ಟ್ವಿಟರ್ ವಿಡಯೋದಲ್ಲಿ ಕಾಣಿಸಿಕೊಂಡಿರುವ ಕಪಿಲ್, ತನ್ನ ಆರೋಗ್ಯದ ಬಗ್ಗೆ ಮಾತನಾಡಿದರಲ್ಲದೆ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. 'ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಸಂತಸ ತರಲಿ ಎಂದು ಆಶಿಸುತ್ತೇನೆ' ಎಂದು ವಿಡಿಯೋದಲ್ಲಿ ಕಪಿಲ್ ಹೇಳಿದ್ದಾರೆ.
1983ರಲ್ಲಿ ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದಾಗ ತಂಡದ ನಾಯಕರಾಗಿದ್ದ ಕಪಿಲ್, ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದರು. ಇದರಲ್ಲಿ ಕಪಿಲ್ ತನ್ನ ಸ್ನೇಹಿತರೊಂದಿಗೆ ಗಾಲ್ಫ್ ಆಡುತ್ತಿದ್ದ ದೃಶ್ಯವಿತ್ತು.