ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರು ಮೀರತ್ನಲ್ಲಿ ಅಪಘಾತಕ್ಕೆ ಒಳಗಾಗಿದೆ. ಕೂದಲೆಳೆಯ ಅಂತರದಲ್ಲಿ ಭೀಕರ ಅಪಘಾತಕ್ಕೆ ಒಳಗಾಗುವದರಿಂದ ಮಾಜಿ ಕ್ರಿಕೆಟಿಗ ಪಾರಾಗಿದ್ದು ಪ್ರವೀಣ್ ಕುಮಾರ್ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪುತ್ರ ಅಪಾಯದಿಂದ ಪಾರಾಗಿದ್ದಾರೆ.
ಎಬಿಪಿ ನ್ಯೂಸ್ ವರದಿಯ ಪ್ರಕಾರ ಮಂಗಳವಾರ ರಾತ್ರಿ ವೇಳೆಗೆ ಈ ಅಪಘಾತ ನಡೆದಿದ್ದು ಪ್ರವೀಣ್ ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪಾಂಡವ ನಗರ ಪ್ರದೇಶದಿಂದ ಬರುತ್ತಿದ್ದಾಗ ಮೀರತ್ ಕಮಿಷನರ್ ಬಂಗಲೆಯ ಬಳಿ ಅತಿ ವೇಗದಲ್ಲಿ ಚಲಿಸುತ್ತಿದ್ದ ಕ್ಯಾಂಟರ್ ಮಾಜಿ ವೇಗಿಯ ಕಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸರು ಆಗಮಿಸಿದಾಗ, ಆರೋಪಿ ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅವರ ಕಾರು ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಪ್ರವೀಣ್ ಕುಮಾರ್ ಅವರ ಕಾರಿಗೆ ತೀವ್ರ ಹಾನಿಯಾಗಿದ್ದರು ಕೂಡ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿವಿಲ್ ಲೈನ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕ್ಯಾಂಟರ್ ಚಾಲಕನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಪ್ರವೀಣ್ ಕುಮಾರ್ ಈ ಹಿಂದೆಯೂ ಅಪಘಾತಕ್ಕೆ ಒಳಗಾಗಿದ್ದರು. 2007ರಲ್ಲಿ ಮೀರತ್ನಲ್ಲಿ ತವರಿಗೆ ಆಗಮಿಸುವ ಸಂದರ್ಭದಲ್ಲಿ ಪ್ರವೀಣ್ ತೆರೆದ ಜೀಪಿನಿಂದ ಬಿದ್ದು ಗಾಯಗೊಂಡಿದ್ದರು.
ಕಳೆದ ಒಂದು ವರ್ಷದ ಅಂತರದಲ್ಲಿ ಭಾರತದ ಕ್ರಿಕೆಟ್ ತಾರೆಯೊಬ್ಬರು ದೊಡ್ಡ ಅಪಘಾತಕ್ಕೆ ಒಳಗಾಗಿರುವುದು ಇದು ಎರಡನೇ ದೃಷ್ಟಾಂತವಾಗಿದೆ. ಕಳೆದ ವರ್ಷಾಂತ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದರು. ತಮ್ಮ ಐಷಾರಾಮಿ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಪಂತ್ ಪವಾಡದ ರೀತಿಯಲ್ಲಿ ಕಾರಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದರು.
ಪ್ರವೀಣ್ ಕುಮಾರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್, ಏಕದಿನ ಮತ್ತು T20 ಎಲ್ಲಾ ಮೂರು ಮಾದರಿಯಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಭಾರತದ ಪರವಾಗಿ 68 ಪಂದ್ಯಗಳಲ್ಲಿ ಆಡಿರುವ ಪ್ರವೀಣ್ ಕುಮಾರ್ 5.13ರ ಎಕಾನಮಿಯಲ್ಲಿ 36.03 ರ ಸ್ಟ್ರೈಕ್ ರೇಟ್ನೊಂದಿಗೆ 78 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. 4/31 ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ.