ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸಿದ ಪಾಕಿಸ್ತಾನ ಒಂದು ಗೆಲುವು ಕಾಣದ ಸೆಮಿಫೈನಲ್ ಓಟದಲ್ಲಿ ಹೊರಗುಳಿದಿದೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ಸಾಕಷ್ಟು ವಿವಾದಗಳು ನಡೆದಿದ್ದವು. ರಾಜಕೀಯ ಉದ್ವಿಗ್ನತೆ ಮತ್ತು ಭದ್ರತಾ ಕಾರಣಗಳಿಂದಾಗಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರ ಅವಕಾಶ ನೀಡಲಿಲ್ಲ.
ಈ ಕಾರಣದಿಂದಾಗಿ ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುವಂತೆ ಆದೇಶಿಸಿತು. ಇಲ್ಲಿಂದ ಬಿಸಿಸಿಐ ಮತ್ತು ಪಿಸಿಬಿ ನಡುವೆ ವಿವಾದಗಳು ಹೆಚ್ಚಾದವು. ಉಭಯ ದೇಶಗಳ ಕ್ರಿಕೆಟ್ ಮಂಡಳಿ ನಡುವೆ ಈ ವಿವಾದಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ವಿವಾದಗಳ ನಡುವೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಇಂಜಮಾಮ್-ಉಲ್-ಹಕ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ವಿಷ ಕಾರಿದ್ದಾರೆ. ವಿಶ್ವ ಶ್ರೀಮಂತ ಕ್ರಿಕೆಟ್ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಅನ್ನು ಬಹಿಷ್ಕರಿಸುವಂತೆ ಇಂಜಮಾಮ್ ಉಲ್ ಹಕ್ ವಿಶ್ವದಾದ್ಯಂತ ಕ್ರಿಕೆಟ್ ಮಂಡಳಿಗಳಿಗೆ ಸಲಹೆ ನೀಡಿದ್ದಾರೆ. ಇದು ಹೊಸ ವಿವಾದದ ಹುಟ್ಟಿಗೆ ಕಾರಣವಾಗಿದೆ.
ಪಾಕಿಸ್ತಾನದ ಟಿವಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಇಂಜಮಾಮ್-ಉಲ್-ಹಕ್, 'ಚಾಂಪಿಯನ್ಸ್ ಟ್ರೋಫಿಯನ್ನು ಪಕ್ಕಕ್ಕೆ ಇರಿಸಿ. ಭಾರತ ತನ್ನ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಆದರೆ ವಿದೇಶಿ ಆಟಗಾರರು ಐಪಿಎಲ್ನಲ್ಲಿ ಆಡುತ್ತಾರೆ ಎಂದು ವಿಶ್ವದಾದ್ಯಂತದ ಕ್ರಿಕೆಟ್ ಮಂಡಳಿಗಳಿಗೆ ನೆನಪಿಸಿದ್ದಾರೆ.
ಇತರ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಐಪಿಎಲ್ಗೆ ಕಳುಹಿಸುವುದನ್ನು ನಿಲ್ಲಿಸಬೇಕು. ನೀವು (ಬಿಸಿಸಿಐ) ನಿಮ್ಮ ಆಟಗಾರರನ್ನು ಲೀಗ್ಗೆ ಕಳುಹಿಸದಿದ್ದರೆ, ಇತರ ಮಂಡಳಿಗಳು ಸಹ ಈ ಬಗ್ಗೆ ನಿಲುವು ತೆಗೆದುಕೊಳ್ಳಬೇಕು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಬಿಸಿಸಿಐ ನಿಯಮದ ಪ್ರಕಾರ, ಯಾವುದೇ ಭಾರತೀಯ ಆಟಗಾರನು ಐಪಿಎಲ್ ಮತ್ತು ದೇಶೀಯ ಟೂರ್ನಿಗಳನ್ನು ಒಳಗೊಂಡಂತೆ ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸದ ಹೊರತು ವಿದೇಶಿ ಲೀಗ್ನಲ್ಲಿ ಆಡಲು ಅವಕಾಶವಿಲ್ಲ.