ಗೌತಮ್ ಗಂಭೀರ್ ಭಾರತ ತಂಡ ಹೆಡ್ಕೋಚ್ ಆಗಿ ಒಂದು ವರ್ಷವನ್ನು ಪೂರೈಸುವ ಮುನ್ನವೇ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ. ಇದಾದ ಬಳಿಕ ಗಂಭೀರ್ ಕೋಚಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕ್ರಿಕೆಟ್ ತಜ್ಞರು, ವಿಮರ್ಶಕರು ಮತ್ತು ಮಾಜಿ ಕ್ರಿಕೆಟಿಗರು ಗಂಭೀರ್ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕೂಡ ಗಂಭೀರ್ಗೆ ಸಲಹೆ ಕೊಟ್ಟಿದ್ದಾರೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದಲ್ಲಿ ಸೂಪರ್ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು. ಪ್ರಸ್ತುತ ಪಾಕಿಸ್ತಾನದ ಕೋಚ್ ಆಕಿಬ್ ಜಾವೇದ್ ಅವರ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ಬಸಿತ್ ಅಲಿ ಸಲಹೆ ನೀಡಿದ್ದಾರೆ.

ಬಾಸಿತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದು, 'ಗೌತಮ್ ಗಂಭೀರ್ ಅವರಿಗೆ ಆಕಿಬ್ ಜಾವೇದ್ ಅವರ ಸೂತ್ರವನ್ನು ಅಳವಡಿಸಿಕೊಳ್ಳಲು ಇದು ಉತ್ತಮ ಸಮಯ. ಕ್ರಿಕೆಟ್ಗೆ ಗೌರವವನ್ನು ನೀಡಿ, ಯಾರು ಕ್ರಿಕೆಟ್ ಅನ್ನು ಗೌರವಿಸುವುದಿಲ್ಲ. ಅವರಿಗೆ ಟಾ-ಟಾ ಬೈ ಬೈ, ಇದು ಸಂದೇಶವಾಗಿರಬೇಕು ಎಂದು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಗೌತಮ್ ಗಂಭೀರ್ ಅವರಿಗೆ ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಆಕಿಬ್ ಅವರು ಇತ್ತೀಚೆಗೆ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆಕಿಬ್ಗಿಂತ ಮೊದಲು, ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಮತ್ತು ಆಸ್ಟ್ರೇಲಿಯಾದ ಜೇಸನ್ ಗಿಲ್ಲೆಸ್ಪಿ ಕ್ರಮವಾಗಿ ಪಾಕಿಸ್ತಾನದ ವೈಟ್-ಬಾಲ್ ಮತ್ತು ರೆಡ್-ಬಾಲ್ ತಂಡಗಳ ಹೆಡ್ಕೋಚ್ ಆಗಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರನ್ನೂ ತಮ್ಮ ಹುದ್ದೆಗಳಿಂದ ತೆಗೆದುಹಾಕಲಾಯಿತು. ಪಾಕಿಸ್ತಾನ ತಂಡದಲ್ಲಿನ ಸೂಪರ್ಸ್ಟಾರ್ ಸಂಸ್ಕೃತಿಯನ್ನು ಆಕಿಬ್ ಕೊನೆಗೊಳಿಸಿದರು. ಫಾರ್ಮ್ ಕಳೆದುಕೊಂಡಿದ್ದ ಬಾಬರ್ ಆಜಮ್, ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡುವ ಕಠಿಣ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು.
ಇದೀಗ ಟೀಮ್ ಇಂಡಿಯಾದಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಸ್ಟಾರ್ ಆಟಗಾರರನ್ನು ತಂಡದಿಂದ ಕೈ ಬಿಡುವಂತೆ ಗೌತಮ್ ಗಂಭೀರ್ ಅವರಿಗೆ ಬಸಿತ್ ಅಲಿ ಸಲಹೆ ಕೊಟ್ಟಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದರು. ಈಗ ಇಂಗ್ಲೆಂಡ್ ಸರಣಿಗೆ ಯಾರಿಗೆಲ್ಲ ಗೇಟ್ ಪಾಸ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಸಿಡ್ನಿ ಟೆಸ್ಟ್ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್ ಕೂಡ ಇದೇ ಮಾತನ್ನು ಹೇಳಿದ್ದರು. ಪ್ರತಿಯೊಬ್ಬ ಆಟಗಾರನನ್ನು ಸಮಾನವಾಗಿ ಪರಿಗಣಿಸುವುದು ಅವರ ಜವಾಬ್ದಾರಿಯಾಗಿದೆ. ಅವರು ಚೊಚ್ಚಲ ಆಟಗಾರರಾಗಿರಲಿ ಅಥವಾ 100 ಟೆಸ್ಟ್ ಪಂದ್ಯಗಳನ್ನು ಆಡಿರುವವರಾಗಿರಲಿ. ಯಾರನ್ನೂ ಹೆಸರಿಸದೆ ಗಂಭೀರ್, ಪ್ರತಿಯೊಬ್ಬ ಆಟಗಾರನಿಗೆ ತನ್ನ ವೃತ್ತಿಜೀವನದಲ್ಲಿ ಯಾವ ಹಂತದಲ್ಲಿ ಇರಬೇಕೆಂದು ತಿಳಿದಿದೆ ಎಂದು ನುಡಿದ್ದರು.