ಕೋಲ್ಕತ್ತಾ, ಜೂ.12: ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯವನ್ನು ಬಿಸಿಸಿಐನ ಮಾಜಿ ಆಯ್ಕೆದಾರರೊಬ್ಬರು ಹೊಸದಾಗಿ ಹೊರ ಹಾಕಿದ್ದಾರೆ. ಎನ್ ಶ್ರೀನಿವಾಸನ್ ಶ್ರೀರಕ್ಷೆಯಿಂದಾಗಿ ಧೋನಿ ನಾಯಕತ್ವದಲ್ಲಿ ಮುಂದುವರೆದರು ಇಲ್ಲದಿದ್ದರೆ ವಿರಾಟ್ ಕೊಹ್ಲಿ 2012ರಲ್ಲೇ ಟೀಂ ಇಂಡಿಯಾ ನಾಯಕರಾಗಿರುತ್ತಿದ್ದರು ಎಂದು ಪೂರ್ವ ವಲಯ ಆಯ್ಕೆದಾರರಾಗಿದ್ದ ರಾಜಾ ವೆಂಕಟ್ ಬಾಂಬ್ ಸಿಡಿಸಿದ್ದಾರೆ.
2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದರೆ, ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಧೋನಿ ಪರ ನಿಂತರು. ಅಲ್ಲಿಂದ ಮುಂದೆ ಹಲವು ಸರಣಿಗಳಲ್ಲಿ ಭಾರತದ ತಂಡದಲ್ಲಿ ಇರುಸು ಮುರುಸು ವೈಮನಸ್ಯ ಎದ್ದು ಕಾಣ ತೊಡಗಿತು.

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಅನುಭವಿಸಿತ್ತು. ಆಡಿಲೇಡ್ ನಲ್ಲಿ ನಡೆ ಯಬೇಕಿದ್ದ ಅಂತಿಮ ಪಂದ್ಯಕ್ಕೂ ಮುನ್ನ ಆಯ್ಕೆ ಸಮಿತಿಯ ಇಬ್ಬರು ಸದಸ್ಯರಾದ ಮೊಹಿಂದರ್ ಅಮರ್ ನಾಥ್ ಮತ್ತು ನರೇಂದ್ರ ಹಿರ್ವಾನಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿ ತಂಡದ ಪರಿಸ್ಥಿತಿ ಗಮನಿಸಿ ತಂಡದಲ್ಲಿ ಒಡಕು ಮೂಡಿರುವುದನ್ನು ವರದಿ ಮಾಡಿದ್ದರು ಎಂದು ರಾಜಾ ವೆಂಕಟ್ ಹೇಳಿದ್ದಾರೆ.
ಪ್ರಥಮ ದರ್ಜೆಮಾಜಿ ಕ್ರಿಕೆಟರ್ ಅವರು ಬೆಂಗಾಳಿ ಪತ್ರಿಕೆ ಎಬೇಲಾದಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ತಂಡಕ್ಕೆ ಸ್ಪೂರ್ತಿ ನೀಡಬಲ್ಲ ಆಟಗಾರ ಯಾರೆಂದು ನೋಡಿದಾಗ ಕೊಹ್ಲಿ ಈ ಸ್ಥಾನಕ್ಕೆ ಸೂಕ್ತ, ದೇವಧರ್ ಟ್ರೋಫಿ ಹಾಗೂ ಅಂಡರ್ 19 ನಾಯಕರಾಗಿ ಕೊಹ್ಲಿ ಕಪ್ ಎತ್ತಿದ್ದಾರೆ ಎಂದು ಆಯ್ಕೆದಾರರು ಹೇಳಿದ್ದರು.
ಅದರೆ, ಎನ್ ಶ್ರೀನಿವಾಸನ್ ಅವರು ಮಾತ್ರ ಧೋನಿ ಪರ ನಿಂತು ಕೊಹ್ಲಿ ಆಯ್ಕೆಯನ್ನು ತಿರಸ್ಕರಿಸಿಬಿಟ್ಟರು. ಅಮರನಾಥ್ ಅವರು ಕೂಡಾ ಧೋನಿಯನ್ನು ಹೊರಹಾಕಲು ಮುಂದಾಗಿದ್ದರು ಎಂದಿದ್ದಾರೆ.