ಪುರುಷರ ಹಾಕಿ ತಂಡದ ಮಾಜಿ ನಾಯಕ ಪಿಆರ್ ಶ್ರೀಜೇಶ್ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪದ್ಮಶ್ರೀ ವಿಜೇತರ ಪಟ್ಟಿಯಲ್ಲಿದ್ದಾರೆ. ಶನಿವಾರ ನಡೆದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಿಗಾಗಿ 139 ಜನರ ಪಟ್ಟಿಯಲ್ಲಿ ನಾಲ್ಕು ಕ್ರೀಡಾಪಟುಗಳು ಮತ್ತು ಪ್ಯಾರಾ-ಕೋಚ್ ಹೆಸರಿಸಲಾಗಿದೆ.
ಭಾರತದ ಹಿರಿಯ ಫುಟ್ಬಾಲ್ ಆಟಗಾರ ಐಎಂ ವಿಜಯನ್ ಮತ್ತು ಭಾರತದ ಮೊದಲ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಆರ್ಚರ್ ಹರ್ವಿಂದರ್ ಸಿಂಗ್ ಅವರು ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಿನ್ನದ ವಿಜೇತ ಮತ್ತು ಖೇಲ್ ರತ್ನ ಪ್ರಶಸ್ತಿ ವಿಜೇತ ಹೈಜಂಪರ್ ಪ್ರವೀಣ್ ಕುಮಾರ್ ಅವರಿಗೆ ತರಬೇತಿ ನೀಡಿದ ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯಪಾಲ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡದೊಂದಿಗೆ ಸತತ ಎರಡನೇ ಒಲಿಂಪಿಕ್ ಕಂಚು ಗೆದ್ದ ನಂತರ ನಿವೃತ್ತರಾದ 36 ವರ್ಷದ ಶ್ರೀಜೇಶ್ ಅವರು ಪ್ರಸ್ತುತ ಜೂನಿಯರ್ ಪುರುಷರ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಇದೀಗ ಶ್ರೀಜೇಶ್ ಅವರ ಸಾಧನೆಗೆ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ 38 ವರ್ಷದ ಅಶ್ವಿನ್ ವಿದಾಯ ಹೇಳಿದ್ದರು. ಅಶ್ವಿನ್ 106 ಪಂದ್ಯಗಳಲ್ಲಿ 537 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಕೇರಳದ ಐಎಂ ವಿಜಯನ್, ಅವರು ಭಾರತದ ದಿಗ್ಗಜ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. 2000-2004ರ ಅವಧಿಯಲ್ಲಿ ಭಾರತದ ನಾಯಕರಾಗಿದ್ದರು. ವಿಜಯನ್ ಭಾರತದ ಪರ 72 ಪಂದ್ಯಗಳನ್ನಾಡಿದ್ದು, 29 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ.
76ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಐವರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಭಾರತರತ್ನ ಮತ್ತು ಪದ್ಮವಿಭೂಷಣ ನಂತರ ಪದ್ಮಭೂಷಣ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ವರ್ಷದ ವಾರ್ಷಿಕ ಗೌರವ ಪಟ್ಟಿಯಲ್ಲಿ ಏಳು ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.