
ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದು ಇದನ್ನೇ
ಈ ಟೆಸ್ಟ್ ಪಂದ್ಯದಲ್ಲಿ ಪ್ರಶ್ನಾರ್ಹವಾಗಿ ಉಳಿದದ್ದು ವಿರಾಟ್ ಕೊಹ್ಲಿಯ ತಂತ್ರಗಾರಿಕೆ. ಹೆಚ್ಚಾಗಿ ತಮ್ಮ ಆಕ್ರಮಣಕಾರಿ ಆಟ ಮತ್ತು ಧೋರಣೆಗೆ ಹೆಸರಾಗಿರುವ ಕೊಹ್ಲಿ, ಮೈದಾನದಲ್ಲಿ ಅಷ್ಟಾಗಿ ಅಗ್ರೆಸ್ಸೀವ್ ಆಗಿ ಕಾಣಿಸಿಕೊಳ್ಳಲಿಲ್ಲ. ಜೊತೆಗೆ, ಹೊಸ ಚೆಂಡನ್ನು ವೇಗಿಗಳಿಗೆ ನೀಡದೇ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ನೀಡಿದ್ದು ವರ್ಕೌಟ್ ಆಗಲಿಲ್ಲ.
ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಕೂಡಾ ಇದೇ ನ್ಯೂನ್ಯತೆಯನ್ನು ಎತ್ತಿ ತೋರಿಸಿದ್ದರು. ಮೂರು ಉತ್ತಮ ವೇಗಿಗಳು ತಂಡದಲ್ಲಿದ್ದಾಗ, ಸ್ಪಿನ್ನರ್ ಗೆ ಬೌಲ್ ನೀಡಿದ್ದು ತಪ್ಪು ಎಂದು ಲಕ್ಷ್ಮಣ್ ಅಭಿಪ್ರಾಯ ಪಟ್ಟರು.

ಕಿವೀಸ್ ಬಾಲಂಗೋಚಿಗಳು
ಸ್ವದೇಶದಲ್ಲಿ ಆಡುವ ಅನುಕೂಲತೆಯಯನ್ನು ಕಿವೀಸ್ ಬೌಲರ್ ಗಳು ಭರ್ಜರಿಯಾಗಿ ಬಳಸಿಕೊಂಡರು. ಇದಕ್ಕೆ ತದ್ವಿರುದ್ದ ಭಾರತದ ಬೌಲರ್ ಗಳು. ಜಸಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ವಿಫಲರಾದರೆ, ಇಶಾಂತ್ ಶರ್ಮಾ ಮಾತ್ರ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾದರು.
ಕಿವೀಸ್ ಬಾಲಂಗೋಚಿಗಳನ್ನು ಬೇಗ ಪೆವಲಿಯನ್ ಗೆ ಕಳುಹಿಸಲು ಟೀಂ ಇಂಡಿಯಾ ವಿಫಲವಾಗಿದ್ದು ಪಂದ್ಯದ ಸೋಲಿಗೆ ಇನ್ನೊಂದು ಕಾರಣವಾಯಿತು. ನ್ಯೂಜಿಲ್ಯಾಂಡ್ ಒಂದು ಹಂತದಲ್ಲಿ 225 ರನ್ನಿಗೆ 7ವಿಕೆಟ್ ಕಳೆದುಕೊಂಡಿತ್ತು. ಆದರೆ, ಕೊನೆಯ ಮೂರು ವಿಕೆಟ್ ನಿಂದ 123 ರನ್ ಬಂತು. ಇದು ನ್ಯೂಜಿಲ್ಯಾಂಡ್ ಉತ್ತಮ ಲೀಡ್ ಗಳಿಸಲು ಶಕ್ತವಾಯಿತು.

ಓಪನಿಂಗ್ ನದ್ದೇ ಸಮಸ್ಯೆ
ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳು ಕಿವೀಸ್ ಸ್ವಿಂಗ್ ಬೌಲಿಂಗ್ ಅನ್ನು ಎದುರಿಸಲು ತಿಣುಕಾಡಿದರು. ಟ್ರೆಂಟ್ ಬೌಲ್ಟ್ ತಂಡಕ್ಕೆ ವಾಪಸ್ ಆಗಿದ್ದು ನ್ಯೂಜಿಲ್ಯಾಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಗಾಳಿಯ ಲಾಭವನ್ನು ಪಡೆದ ನ್ಯೂಜಿಲ್ಯಾಂಡ್ ಸ್ಟ್ರೈಕ್ ಬೌಲರ್ ಗಳು, ಭಾರತವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರು.
ಭಾರತಕ್ಕೆ ಪ್ರಮುಖ ಸಮಸ್ಯೆಯಾಗಿ ಕಾಡಿದ್ದು ಆರಂಭಿಕ ಆಟಗಾರರು. ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ವಿಕೆಟಿಗೆ ಹದಿನಾರು, ಎರಡನೇ ಇನ್ನಿಂಗ್ಸ್ ನಲ್ಲಿ 27 ರನ್ ಪೃಥ್ವಿ ಶಾ ಮತ್ತು ಮಯಾಂಕ್ ಅಗರವಾಲ್ ಜೋಡಿಯಿಂದ ಬಂತು. ತಂಡದ ಸೋಲಿಗೆ ಕಾರಣವಾದ ಅಂಶಗಳಲ್ಲಿ ಇದೂ ಒಂದು.

ಪರದಾಡಿದ ಪೂಜಾರ, ವಿರಾಟ್ ಕೊಹ್ಲಿ
ಟೀಂ ಇಂಡಿಯಾದಲ್ಲಿ ಅನುಭವಿಗಳೆಂದು ಇರುವುದು ಜಿತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ, ಕಿವೀಸ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಇಬ್ಬರೂ ವಿಫಲರಾದರು. ಇವರಿಬ್ಬರು ಎರಡೂ ಇನ್ನಿಂಗ್ಸ್ ನಲ್ಲಿ ವಿಫಲವಾಗಿದ್ದು ಮತ್ತು ಅಜಿಂಕ್ಯಾ ರಹಾನೆ ಕೂಡಾ, ದೊಡ್ದ ಮೊತ್ತ ಪೇರಿಸಲಾಗದಿದ್ದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಸಾಮಾನ್ಯವಾಗಿ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ, ತಾಳ್ಮೆಯಿಂದ ಆಡುವ ಪೂಜಾರ ವೈಫಲ್ಯತೆ, ಉತ್ತಮ ಫಾರಂನಲ್ಲಿದ್ದ ಕೊಹ್ಲಿ ಕೂಡಾ ಕ್ರೀಸ್ ನಲ್ಲಿ ಜಾಸ್ತಿ ಹೊತ್ತು ಉಳಿಯದೇ ಇದ್ದದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.


Click it and Unblock the Notifications
