ಜುಲೈ 4 ಗುರುವಾರ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಬಾರ್ಬಡೋಸ್ನಿಂದ ತವರಿಗೆ ಮರಳಿದೆ. ದೆಹಲಿಯಲ್ಲಿ ಚಾಂಪಿಯನ್ಗಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ಎಲ್ಲೆಂದರಲ್ಲಿ ಡ್ರಮ್ಗಳು ಕಂಡು ಬಂದವು. ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯ ಕೂಡ ಡ್ರಮ್ಗಳ ಸದ್ದಿಗೆ ಮನಸೋತು ಸಖತ್ ಡ್ಯಾನ್ಸ್ ಮಾಡಿದರು.
ಇದೀಗ ವಿಜಯೋತ್ಸವದ ಮುಂಬೈನ ವಾಂಖೆಡೆಯಲ್ಲಿ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೆರವಣಿಗೆ ಬಳಿಕ ವಾಂಖೆಡೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಟಿ20 ವಿಶ್ವಕಪ್ ಗೆದ್ದ ಬಳಿಕ 3 ದಿನಗಳ ಕಾಲ ಬಾರ್ಬಡೋಸ್ನಲ್ಲಿ ಸಿಲುಕಿದ್ದ ಟೀಮ್ ಇಂಡಿಯಾ ಅಂತಿಮವಾಗಿ ಜುಲೈ 4 ರಂದು ಬೆಳಿಗ್ಗೆ 6 ಗಂಟೆಗೆ ದೆಹಲಿಗೆ ಬಂದಿಳಿದಿದೆ. ಇದಾದ ನಂತರ ಕೆಲ ಗಂಟೆಗಳ ವಿಶ್ರಾಂತಿಯ ಬಳಿಕ ಟೀಮ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ತೆರಳಿತು.
12.30 ರ ಸುಮಾರಿಗೆ ಪ್ರಧಾನಿಯವರೊಂದಿಗಿನ ಸಭೆ ಮುಗಿದ ನಂತರ, ರೋಹಿತ್ ಶರ್ಮಾ ಪಡೆ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಮುಂಬೈಗೆ ಪ್ರಯಾಣ ಆರಂಭವಾಗಿದೆ.
ಮುಂಬೈನಲ್ಲಿ ಸಂಜೆ 5 ರಿಂದ 7 ಗಂಟೆ ವರೆಗೆ ಭಾರತ ತಂಡವು ಮರೈನ್ ಡ್ರೈವ್ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಕ್ಟರಿ ಪರೇಡ್ ನಡೆಸಲಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲು ನಾಯಕ ರೋಹಿತ್ ಶರ್ಮಾ ಮತ್ತು ಜಯ್ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ನೀಡಿದ್ದಾರೆ.
ಟೀಮ್ ಇಂಡಿಯಾದ ವಿಜಯೋತ್ಸವದ ಮೆರವಣಿಗೆಯನ್ನು ಸಂಪೂರ್ಣವಾಗಿ ಅಭಿಮಾನಿಗಳು ಉಚಿತವಾಗಿ ವೀಕ್ಷಿಸಬಹುದು. ಟೀಮ್ ಇಂಡಿಯಾ ತವರಿಗೆ ಮರಳುವ ಮುನ್ನವೇ ಸ್ಟಾರ್ ಸ್ಪೋರ್ಟ್ಸ್ ಈ ಬಗ್ಗೆ ತಿಳಿಸಿತ್ತು.
ವಿಜಯೋತ್ಸವದ ಮೆರವಣಿಗೆಯನ್ನು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ವೀಕ್ಷಿಸಬಹುದು. ಇದಲ್ಲದೇ ವಾಂಖೆಡೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ. ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಉಚಿತವಾಗಿ ನೋಡಿ ಕಣ್ತುಂಬಿಗೊಳ್ಳಲು ಅವಕಾಶ ನೀಡಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 17 ವರ್ಷಗಳ ನಂತರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಒಂದು ಪಂದ್ಯವನ್ನು ಸೋತಿಲ್ಲ. ಭಾರತ ಫೈನಲ್ ಸೇರಿದಂತೆ ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ.