ರಿಂಕು ಸಿಂಗ್.. ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗಿ ಬಂದ ಕ್ರಿಕೆಟ್ ಆಟಗಾರ. ರಾತ್ರೋ ರಾತ್ರಿ ಇವರಿಗೆ ಸ್ಟಾರ್ ಗಿರಿ ಸಿಕ್ಕಿದಲ್ಲ. ಇದಕ್ಕಾಗಿ ಅವರು ಹಗಲು ರಾತ್ರಿ ಕಷ್ಟ ಪಟಿದ್ದಾರೆ. ಅದರ ಫಲವಾಗಿಯೇ ರಿಂಕು ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿ ಸುದ್ದಿಯಾದರು.
ಐಪಿಎಲ್ನಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ರಿಂಕು ಸಿಂಗ್, ಅಮೋಘ ಪ್ರದರ್ಶನ ನೀಡಿದ್ದಾರೆ. 2023ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಅನಾವರಣ ಮಾಡಿದ್ದರು. ಐಪಿಎಲ್ನ 13ನೇ ಪಂದ್ಯದಲ್ಲಿ ರಿಂಕು ಬ್ಯಾಟಿಂಗ್ ಧಾಟಿ ಕಂಡು ವಿಶ್ವವೇ ನಿಬ್ಬೆರಗಾಗಿತ್ತು.

ಅಹಮದಾಬಾದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ನಿಗದಿತ ಓವರ್ಗಳಲ್ಲಿ 4 ವಿಕೆಟ್ಗೆ 204 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 19 ಓವರ್ಗಳಲ್ಲಿ 176 ರನ್ ಕಲೆ ಹಾಕಿ ಏಳು ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಓವರ್ನಲ್ಲಿ 29 ರನ್ಗಳ ಅವಶ್ಯಕತೆ ಇತ್ತು.
ಉಮೇಶ್ ಯಾದವ್ ಸಿಂಗಲ್ ರನ್ ಪಡೆದರು. ರಿಂಕು ಸಿಂಗ್ ಬ್ಯಾಟಿಂಗ್ ಬಂದರು. ಆಗ ಐದು ಎಸೆತಗಳಲ್ಲಿ 28 ರನ್ಗಳ ಅವಶ್ಯಕತೆ ಇತ್ತು. ಕಬ್ಬಿಣದ ಕಡಲೆಯಂತೆ ಕಂಡು ಬಂದ ಈ ಸವಾಲಿನ ಗುರಿಯನ್ನು ರಿಂಕು, ಆತ್ಮವಿಶ್ವಾಸದಿಂದ ಮುಟ್ಟಿದರು. ಯಶ್ ದಯಾಳ್ ಎಸೆದ ಕೊನೆಯ ಓವರ್ನ ಮುಂದಿನ ಐದು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ರಿಂಕು ಸುದ್ದಿಯಾದರು.
ಸದ್ಯ ಭಾರತ ಟಿ20 ಕ್ರಿಕೆಟ್ನ ಖಾಯಂ ಸದಸ್ಯರಾಗಿರುವ ರಿಂಕು ಸಿಂಗ್, ಈ ಹಂತಕ್ಕೆ ತಲುವುದು ಅಷ್ಟು ಸುಲಭವಾಗಿರಲಿಲ್ಲ. ಅವರು ಬಡ ಕುಟುಂಬದಿಂದ ಬಂದವರು. ರಿಂಕು ಅವರ ತಂದೆ ಖಾನ್ಚಂದ್ರ ಸಿಂಗ್ ಎಲ್ಪಿಜಿ ಸಿಲಿಂಡರ್ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದರು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುವ ಅವಶ್ಯಕತೆ ಇಲ್ಲವೇ ಇಲ್ಲ.

ಆರ್ಥಿಕ ಪರಿಸ್ಥಿತಿಯ ಕಾರಣದಿಂದ ರಿಂಕು ಅವರ ತಂದೆ ಅವರಿಗೆ ಕ್ರಿಕೆಟ್ ಆಡದಂತೆ ಸೂಚಿಸಿದ್ದರು. ಆದರೆ ಅವರು ತಾಯಿಗೆ ಹೇಳಿ ಕ್ರಿಕೆಟ್ ಆಟ ಮುಂದುವರೆಸಿದ್ದರು. ಮೈಮೇಲೆ ಬ್ಲ್ಯೂ ಜೆರ್ಸಿ ಹಾಕಿಕೊಳ್ಳುವ ವರೆಗಿನ ಕ್ರಿಕೆಟ್ ಜರ್ನಿಯನ್ನು ರಿಂಕು, ಮಾಜಿ ಕ್ರಿಕೆಟ್ ಆಟಗಾರ ಆಕಾಶ್ ಚೋಪ್ರಾ ಯೂಟ್ಯೂಬ್ ಚಾನೆಲ್ನಲ್ಲಿ ವಿವರಿಸಿದ್ದಾರೆ.
ರಿಂಕು ಸಿಂಗ್ ತಮ್ಮ ಕಥೆಯನ್ನು ಹೇಳಿಕೊಳ್ಳುವಾಗ ಒಂದು ಟೂರ್ನಿಯಲ್ಲಿ ಭಾಗವಹಿಸಲು ತಮ್ಮ ಬಳಿ ಹಣವಿರಲಿಲ್ಲ. ಈ ಸಮಯದಲ್ಲಿ ತಮ್ಮ ತಾಯಿ ಅಂಗಡಿಯೊಂದರಿಂದ ಹಣವನ್ನು ಸಾಲ ಪಡೆದು ಬಂದಿದ್ದಳು ಎಂದು ತಿಳಿಸಿದ್ದಾರೆ. ಹಿಂದಿನ ಕಷ್ಟದ ದಿನಗಳನ್ನು ರಿಂಕು ಸ್ಮರಿಸಿದ್ದಾರೆ. ಈ ವೇಳೆ ನಮ್ಮ ತಂದೆ ನನಗೆ ಕ್ರಿಕೆಟ್ ಆಡಲು ಬಿಡುತ್ತಿರಲಿಲ್ಲ. ಕ್ರಿಕೆಟ್ ಆಡಲು ಹೊರಟರೆ ಹೊಡೆಯುತ್ತಿದ್ದರು. ನಮ್ಮ ಸಹೋದರ ಕೋಚಿಂಗ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ನನಗೂ ಅಲ್ಲಿಯೇ ಕೆಲಸ ಮಾಡು ಎಂದು ತಿಳಿಸಿದ್ದರು. ಒಂದೆರಡು ದಿನ ಕೆಲಸ ಮಾಡಿ ಬಿಟ್ಟು ಬಂದೆ.

ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದುಬೈ ತಂಡಗಳು ಭಾರತಕ್ಕೆ ಬಂದಾಗ, ನಾನು ತಂಡದಲ್ಲಿ ಸ್ಥಾನ ಪಡೆದೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದಕ್ಕಾಗಿ ನನಗೆ ಬೈಕ್ ಸಹ ನೀಡಿದರು. ಅದನ್ನು ನೋಡಿದ ತಂದೆ ನನ್ನನ್ನು ಬೈಯುವುದು ಹಾಗೂ ಹೊಡೆಯುವುದನ್ನು ಬಿಟ್ಟರು.
ಐಪಿಎಲ್ ಆಕ್ಷನ್ನಲ್ಲಿ ನನ್ನನ್ನು ತಂಡ ಖರೀದಿಸಿದೆ ಎಂದು ತಿಳಿದು ಮನೆಯವರು ತುಂಬ ಖುಷ್ ಆದರು. ಆಗ ನೀಡಿದ ಹಣದಿಂದಲೇ ನಾನು ಮನೆಯನ್ನು ಕಟ್ಟಿಸಿದೆ. ಅದೇ ಮನೆಯಲ್ಲಿ ಈಗ ನಮ್ಮ ಕುಟುಂಬ ವಾಸಿಸುತ್ತಿದೆ ಎಂದು ತಿಳಿಸಿದ್ದಾರೆ.