
ನವದೆಹಲಿ, ಮೇ 1: ಗೌತಮ್ ಗಂಭೀರ್ ಅವರು ಮಾನಸಿಕವಾಗಿ ಅಭದ್ರತೆ ಅನುಭವಿಸುತ್ತಿದ್ದರು. ಆದರೆ ಅವರ ಈ ಮಾನಸಿಕ ಸ್ಥಿತಿ ಅವರನ್ನು ಯಶಸ್ವಿ ಬ್ಯಾಟ್ಸ್ಮನ್ ಆಗುವುದರಿಂದ ತಡೆಯಲಿಲ್ಲ ಎಂದು ಭಾರತ ತಂಡದ ಮೆಂಟಲ್ ಕಂಡೀಷನಿಂಗ್ (ವರ್ತನಾ ಪ್ರಕ್ರಿಯೆ) ಮಾಜಿ ಕೋಚ್ ಪ್ಯಾಡಿ ಅಪ್ಟನ್ ತನ್ನ ನೂತನ ಪ್ರಕಟಿತ ಕೃತಿಯಲ್ಲಿ ಬರೆದುಕೊಂಡಿದ್ದಾರೆ.
'ದ ಬೇರ್ಫೂಟ್ ಕೋಚ್' ಕೃತಿಯಲ್ಲಿ ಅಪ್ಟನ್, ಪ್ರಮುಖ ಕ್ರೀಡಾಪಟುಗಳ ಮಾನಸಿಕ ಕಠಿಣತೆ ಮತ್ತು ಸಂದರ್ಭಗಳಿಗೆ ಅವರು ಪ್ರತಿಕ್ರಿಯಿಸುವ ಬಗ್ಗೆ ವಿವರಣೆಗಳನ್ನು ನೀಡಿದ್ದಾರೆ. ಗಂಭೀರ್ ಮಾನಸಿಕವಾಗಿ ಅಭದ್ರ, ನಕಾರಾತ್ಮಕ ಮತ್ತು ನಿರಾಶಾವಾದಿಯಾಗಿದ್ದಾರಾದರೂ ಅವರು ಇನ್ನೊಬ್ಬರಿಗೆ ನೋಯಿಸುವುದೇನೂ ಕಂಡುಬಂದಿಲ್ಲ ಎಂದು ಪ್ಯಾಡಿ ಬರೆದುಕೊಂಡಿದ್ದಾರೆ.
'2009ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದ ಗಂಭೀರ್ಗೆ ನಾನು ನನ್ನ ಕೆಲವು ಅತ್ಯುತ್ತಮ ಮತ್ತು ಪರಿಣಾಮಕಾರಿ ಮೆಂಟಲ್ ಕಂಡೀಷನಿಂಗ್ ಪರೀಕ್ಷೆಗಳನ್ನು ನಡೆಸಿದ್ದೆ. ಗಂಭೀರ್ ವಿಶ್ವದ ಅತ್ಯುತ್ತಮ ಕ್ರಿಕೆಟರ್ ಅನ್ನಿಸುವವರೆಗೂ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ' ಎಂದು ಆಪ್ಟನ್ ಬರೆದಿದ್ದಾರೆ (ಎಡಬದಿಯಲ್ಲಿರುವವರು ಅಪ್ಟನ್).
ಸದ್ಯ ರಾಜಕಾರಣದಲ್ಲಿರುವ ಗೌತಮ್ ಗಂಭೀರ್ ಬಿಜೆಪಿಯಿಂದ ಪೂರ್ವ ದೆಹಲಿ ಕ್ಷೇತ್ರದ ಸ್ಪರ್ಧಿ. ಪಿಟಿಐ ಜೊತೆ ಈ ಬಗ್ಗೆ ಮಾತನಾಡಿದ ಗಂಭೀರ್, 'ಮಾನಸಿಕವಾಗಿ ಅಭ್ರದನಾಗಿದ್ದರೂ ಯಶಸ್ವಿ ಆಟಗಾರನಾದೆ ಎಂದು ಹೇಳಿರುವುದರಿಂದ ಅಪ್ಟನ್ ಅವರ ದೃಷ್ಟಿಕೋನದಲ್ಲಿ ದುರುದ್ದೇಶವಿಲ್ಲ' ಎಂದಿದ್ದಾರೆ.