
ನವದೆಹಲಿ, ಡಿಸೆಂಬರ್ 15: ಎಲ್ಲಾ ಮದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿದೇಶದಲ್ಲಿ ನಿಮ್ಮ ಪ್ರಮುಖ ಸಾಧನೆಯೇನು? ಎಂಬಂತೆ ಶಾಸ್ತ್ರಿಗೆ ಗಂಭೀರ್ ಗಂಭೀರ ಪ್ರಶ್ನೆಯೊಂದನ್ನು ಎಸೆದಿದ್ದಾರೆ.
ಗಂಭೀರ್ ಅಸಮಾಧಾನಕ್ಕೆ ರವಿ ನೀಡಿದ್ದ ಹೇಳಿಕೆ ಕಾರಣವಂತೆ. ಕಳೆದ 15 ವರ್ಷಗಳಿಂದ ಭಾರತ ತಂಡ ವಿಶ್ವದಲ್ಲೇ ಅತ್ಯುತ್ತಮ ತಂಡವಾಗಿ ಗುರುತಿಸಿಕೊಂಡಿದೆ ಎಂದು ರವಿಶಾಸ್ತ್ರಿ ಈ ಹಿಂದೆ ಹೇಳಿಕೆ ನೀಡಿದ್ದರು. ಇದು ಗೌತಮ್ ಗಂಭೀರ್ ಅವರ ಕೋಪಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ನೆಟ್ವರ್ಕ್ 18 ಜೊತೆ ಮಾತನಾಡುತ್ತ ಗೌತಮ್, 'ರವಿ ಶಾಸ್ತ್ರಿ ಅವರ ಹೇಳಿಕೆ ಬಾಲಿಷವಾದುದು. ಕೋಚ್ ಆಗಿ ಅವರು ಬಂದ ಮೇಲೆ ಏನೆಲ್ಲಾ ಸಾಧನೆಗಳಾಗಿವೆ ಎಂಬುದರ ಬಗ್ಗೆ ಅವರಿಗೆ ಒಂಚೂರೂ ಖಚಿತತೆಯಿಲ್ಲ' ಎಂದಿದ್ದಾರೆ.
'ಗೆಲುವು ಕಾಣದ ವ್ಯಕ್ತಿಗಳಷ್ಟೇ ಇಂಥ ಹೇಳಿಕೆಗಳನ್ನು ನೀಡುತ್ತಾರೆ ಎಂಬುದನ್ನು ನಾನು ಸ್ಪಷ್ಟವಾಗಿ ಬಲ್ಲೆ. ಆಸ್ಟ್ರೇಲಿಯಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಗೆದ್ದಿದ್ದು ಬಿಟ್ಟರೆ ಶಾಸ್ತ್ರಿ ಅವರಿಂದಾದ ಗಮನಾರ್ಹ ಸಾಧನೆಗಳು ಏನೆಂಬುದೇ ನನಗೆ ಗೊತ್ತಿಲ್ಲ' ಎಂದು ಗಂಭೀರ್ ರವಿಯತ್ತ ಚಾಟಿ ಬೀಸಿದ್ದಾರೆ.
ವಿಚಾರ ಏನಿದ್ದರೂ ಗಂಭೀರ್ ಅವರು ಹಿರಿಯ ಆಟಗಾರರ, ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದಲ್ಲಿದ್ದವರನ್ನು ಹೀಗೆ ಹೀಯಾಳಿಸಿ ಪ್ರಶ್ನಿಸಿದ್ದು ಸರಿಯಲ್ಲ ಎಂಬ ಮಾತುಗಳು ಕ್ರೀಡಾ ವಲಯಗಳಲ್ಲಿ ಕೇಳಿ ಬಂದಿವೆ. ತಂಡವನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಹೇಳಿರಬಹುದಾದ ಶಾಸ್ತ್ರಿ ಹೇಳಿಕೆಯನ್ನು ಮುಂದಿಟ್ಟು ಗಂಭೀರ್ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.