
2011ರ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡದ ಅಂದಿನ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಕೂಡ ಪ್ರಮುಖ ಕಾರಣ. ವಿಶ್ವಕಪ್ ಸರಣಿಯುದ್ಧಕ್ಕೂ ಅತ್ಯುತ್ತಮ ಫಾರ್ಮ್ನಲ್ಲಿದ್ದ ಗೌತಮ್ ಗಂಭೀರ್ ಫೈನಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಕೇವಲ ಮೂರೇ ರನ್ನಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡಿದ್ದರು. ವಿಶ್ವಕಪ್ ಫೈನಲ್ನಲ್ಲಿ 97ರನ್ಗೆ ವಿಕೆಟ್ ಕಳೆದುಕೊಂಡ ವಿಚಾರವಾಗಿ ಗಂಭೀರ್ ಹೇಳಿಕೆಯೊಂದನ್ನು ನೀಡಿದ್ದಾರೆ.
2011ರ ವಿಶ್ವಕಪ್ ಫೈನಲ್ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಶ್ರೀಲಂಕಾ ನೀಡಿದ್ದ ಗುರಿಯನ್ನು ಬೆನ್ನತ್ತಿದ್ದ ಭಾರತ ತನ್ನ 32 ರನ್ಗೆ ತೆಂಡೂಲ್ಕರ್ ಹಾಗೂ ಸೆಹ್ವಾಗ್ ವಿಕೆಟನ್ನು ಕಳೆದುಕೊಂಡಿತು. ಆಗ ನಾಯಕ ಧೋನಿ ಜೊತೆಗೆ ಇನ್ನಿಂಗ್ಸ್ ಕಟ್ಟಿದ್ದು ಗೌತಮ್ ಗಂಭೀರ್. ಇವರಿಬ್ಬರು 109ರನ್ಗಳ ಅಮೂಲ್ಯ ಜೊತಯಾಟವನ್ನು ನೀಡಿದ್ದರು. ಆದರೆ ಶತಕಕ್ಕೆ ಇನ್ನು ಕೇವಲ ಮೂರು ರನ್ನಿದ್ದಾಗ 42ನೇ ಓವರ್ನಲ್ಲಿ ತಿಸರ ಪೆರೆರಾ ಎಸೆತಕ್ಕೆ ಗಂಭೀರ್ 97 ರನ್ ಗಳಿಸಿ ಔಟಾಗಿಬಿಟ್ಟರು.
ಔಟಾಗೋದಿಕ್ಕೂ ಮುನ್ನ ನಾಯಕ ಗಂಭೀರ್ಗೆ ಒಂದು ಮಾತನ್ನು ಹೇಳಿದ್ದರಂತೆ. ಶತಕಕ್ಕೆ ಕೇವಲ 3ರನ್ಗಳಿಂದಷ್ಟೇ ಹಿಂದೆ ಇದ್ದೀಯ ಎಂದು ಧೋನಿ ಗಂಭೀರ್ಗೆ ನೆನಪಿಸಿದ್ದರಂತೆ. ಅದು ಗೌತಮ್ ಗಂಭೀರ್ ಅವರನ್ನು ಕಾನ್ಶಿಯಸ್ ಆಗುವಂತೆ ಮಾಡಿ ಔಟಾಗಲು ಕಾರಣವಾಯಿತು ಅನ್ನುವ ವಿಚಾರವನ್ನು ಗಂಭೀರ್ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದಾರೆ.
97ರನ್ಗಳಿಸಿದ್ದ ಸಂರ್ಭದಲ್ಲಿ ಏನಾಯಿತು ಎಂದು ನನ್ನಲ್ಲಿ ನಾನೇ ಹಲವು ಬಾರಿ ಕೇಳಿಕೊಂಡಿದ್ದೇನೆ. 97ರನ್ಗಳಿಸುವವರೆಗೂ ನಾನು ನನ್ನ ವೈಯಕ್ತಿಕ ಮೊತ್ದ ಕಡೆಗೆ ಗಮನ ಹರಿಸಿರಲೇ ಇಲ್ಲ. ನನ್ನ ಗುರಿ ಶ್ರೀಲಂಕಾ ಕೊಟ್ಟಿದ್ದ ಟಾರ್ಗೆಟ್ ಆಗಿತ್ತು. ಆದರೆ ಓವರ್ ಅಂತ್ಯದಲ್ಲಿ ಧೋನಿ ಶತಕದ ವಿಚಾರವನ್ನು ನೆನಪಿಸಿದರು.
ಆ ಕ್ಷಣಕ್ಕೆ ನನ್ನ ಗುರಿ ಶತಕವನ್ನು ಸಂಪೂರ್ಣಗೊಳಿಸುವತ್ತ ಹೊರಳಿತು. ಅಲ್ಲಿಯವರೆಗೂ ನಾನು ವರ್ತಮಾನದಲ್ಲಿದ್ದೆ. ಆದರೆ ನಾನು ತಂಡದ ಗುರಿ ಬದಲಾಗಿ ನನ್ನ ವೈಯಕ್ತಿಕ ಮೊತ್ತದತ್ತ ಗಮನ ಹರಿದು ಒತ್ತಡಕ್ಕೆ ಒಳಗಾಗಿ ವಿಕೆಟ್ ಕಳೆದುಕೊಳ್ಳಬೇಕಾಯಿತು. ಯುವ ಜನರಿಗೆ ನಾನು ಇದೇ ಮಾತನ್ನು ಹೇಳಲಿಚ್ಛಿಸುತ್ತೇನೆ. ವೈಯಕ್ತಿಕ ಗುರಿಯತ್ತ ಗಮನಹರಿಸದೆ ತಂಡದ ಗುರಿಯತ್ತವೇ ಗಮನ ಹರಿಸಬೇಕು ಎಂದರು.
ಈ ಪಂದ್ಯದಲ್ಲಿ ಭಾರತ ಗಂಭೀರ್ ಅವರ ವಿಕೆಟ್ ಕಳೆದುಕೊಂಡ ಬಳಿಕ ಕೇವಲ 52ಎಸತಕ್ಕೆ 52ರನ್ ಗಳಿಸಬೇಕಿತ್ತಿ. ನಾಯಕ ಧೋನಿ ಹಾಗೂ ಯುವರಾಜ್ಸಿಂಗ್ ಕೂಡಿಕೊಂಡು ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದರು. ಆ ಮೂಲಕ ಭಾರತ ವರ್ಷಗಳ ಬಳಿಕ ವಿಶ್ವಕಪ್ಅನ್ನು ಎತ್ತಿಹಿಡಿಯಿತು.