
ನವದೆಹಲಿ, ಫೆಬ್ರವರಿ 26: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ (ಐಎಎಫ್-ಇಂಡಿಯನ್ ಏರ್ ಫೋರ್ಸ್) ಪಾಕಿಸ್ತಾನ ಮತ್ತು ಕಾಶ್ಮೀರ ಆಕ್ರಮಿತ ಪಾಕಿಸ್ತಾನ ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಭಾರತೀಯ 40ಕ್ಕೂ ಅಧಿಕ ಯೋಧರು ಮೃತರಾಗಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಭಾರತ, ಪಾಕಿಸ್ತಾನದ ಬಾಲಾಕೋಟ್, ಚಕೋತಿ ಮತ್ತು ಮುಝಾಫರಬಾದ್ ಸ್ಥಳಗಳಲ್ಲಿದ್ದ ಉಗ್ರರ ಅಡಗುತಾಣಗಳನ್ನು ಮಂಗಳವಾರ (ಫೆಬ್ರವರಿ 26) ಬಾಂಬ್ ದಾಳಿ ಮೂಲಕ ದ್ವಂಸಗೊಳಿಸಿತ್ತು.
ಇದಕ್ಕೆ ಖುಷಿ ವ್ಯಕ್ತಪಡಿಸಿರುವ ಸೆಹ್ವಾಗ್, 'ಹುಡುಗರು ಚೆನ್ನಾಗಿ ಆಡಿದ್ದಾರೆ' ಎಂದು ಕ್ರಿಕೆಟ್ ಸ್ಟೈಲಲ್ಲೇ ಟ್ವೀಟ್ ಮಾಡಿದ್ದಾರೆ. ಭಾರತೀಯ ವಾಯುಸೇನೆಯನ್ನು ಅಭಿನಂದಿಸಿದ್ದಾರೆ. ಮತ್ತೊಬ್ಬ ಮಾಜಿ ಕ್ರಿಕೆಟಿಗ ಗಂಭೀರ್ ಕೂಡ ಟ್ವೀಟ್ನಲ್ಲಿ, 'ಜೈ ಹಿಂದ್, ಐಎಎಫ್' ಎಂದು ಬರೆದುಕೊಂಡಿದ್ದಾರೆ. ಭಾರತೀಯ ಸೇನೆಯ ಪ್ರತಿದಾಳಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಫೆಬ್ರವರಿ 140ರಂದು ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುತ್ತಿರುವ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಬಾಂಬ್ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಬಲಿ ಪಡೆದಿತ್ತು. ಇದಕ್ಕೆ ತಿರುಗೇಟು ನೀಡಲು ಕಾಯುತ್ತಿದ್ದ ಭಾರತ ಇಂದು (ಫೆಬ್ರವರಿ 26) ಪಾಕ್ಗೆ ಬಿಸಿ ಮುಟ್ಟಿಸಿದೆ.