

ಕೋಲ್ಕತ್ತಾ, ಅಕ್ಟೋಬರ್ 30: ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣವನ್ನು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಎಒ) ನಿಭಾಯಿಸುತ್ತಿರುವ ರೀತಿಗೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಸಿಡುಕಾಡಿದ್ದಾರೆ. ಬಿಸಿಸಿಐಗೆ ಪತ್ರವೂ ಬರೆದು ಪ್ರಕರಣದ ಕುರಿತು ತನ್ನ ತಳಮಳವನ್ನು ತಿಳಿಸಿದ್ದಾರೆ.
ಏಪ್ರಿಲ್ 2016ರಿಂದಲೂ ಬಿಸಿಸಿಐ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಜೋಹ್ರಿ ವಿರುದ್ಧ, ಅಪರಿಚಿತೆಯೊಬ್ಬರು ತನ್ನ ಮೇಲೆ ಜೋಹ್ರಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿದ್ದರು. ಇದರ ತನಿಖೆಗೆ ಸಿಒಎ ಮುಂದಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವಂತೆ ರಾಹುಲ್ ಅವರನ್ನು ಸಿಎಒ ಕೇಳಿತ್ತು.
ಭಾರತ ಕ್ರಿಕೆಟ್ ಬೋರ್ಡ್ ಒಳಗೂ ಲೈಂಗಿಕ ದೌರ್ಜನ್ಯದ ಪ್ರಕರಣ ನುಸುಳಿದ್ದರಿಂದ ಸಹಜವಾಗಿ ಅಸಮಾಧಾನಗೊಂಡಿರುವ ಗಂಗೂಲಿ, ಬಿಸಿಸಿಐಗೆ ಪತ್ರ ಬರೆದು 'ಭಾರತೀಯ ಕ್ರಿಕೆಟ್ ಆಡಳಿತ ಎತ್ತ ಸಾಗುತ್ತಿದೆ ಎಂಬ ಬಗ್ಗೆ ನನಗೆ ಕಳವಳವಾಗುತ್ತಿದೆ' ಎಂದು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಬಗ್ಗೆ ಜೋಹ್ರಿ ಮೇಲಾಗಿರುವ ಆರೋಪ, ಮತ್ತು ಪ್ರಕರಣವನ್ನು ನಿಭಾಯಿಸುವ ರೀತಿ ಭಾರತೀಯ ಕ್ರಿಕೆಟ್ ಮಂಡಳಿಯ ದೌರ್ಬಲ್ಯವನ್ನು ತಿಳಿಸುತ್ತದೆ ಎಂಬ ರೀತಿಯಲ್ಲಿ ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
'ಆರೋಪ ಎಷ್ಟು ಸತ್ಯದ್ದೋ ಎಂಬುದು ನನಗೆ ಗೊತ್ತಿಲ್ಲ. ಆದರೆ ಆರೋಪ ಪ್ರಕರಣ ಬಿಸಿಸಿಯನ್ನಂತೂ ದುರ್ಬಲಗೊಳಿಸುತ್ತಿದೆ. ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ನಲ್ಲೇ ಆಡಳಿತಕ್ಕೆ ಸಂಬಂಧಿಸಿ ಗೊಂದಲವಿದೆ, ದ್ವಂದ್ವ ಇದ್ದಂತೆ ಕಾಣುತ್ತಿದೆ' ಎಂದು ಗಂಗೂಲಿ ಪತ್ರದಲ್ಲಿ ಬರೆದಿದ್ದಾರೆ.
ಬರೆದಿರುವ ಪತ್ರದಲ್ಲಿ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ್ ಚೌಧರಿ, ಆ್ಯಕ್ಟಿಂಗ್ ಪ್ರೆಸಿಡೆಂಟ್ ಸಿಕೆ ಖನ್ನಾ ಹೆಸರುಗಳನ್ನು ಉದ್ದೇಶಿಸಿ ಲೈಂಗಿಕ ದೌರ್ಜನ್ಯ ಆರೋಪ, ಮತ್ತು ಅದನ್ನು ನಿಭಾಯಿಸುತ್ತಿರುವ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.