
ಕೊಲ್ಕತ್ತಾದಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯ ಭಾರೀ ಯಶಸ್ಸು ಕಂಡಿದೆ. ಈ ಯಶಸ್ಸಿನ ಹಿಂದಿದ್ದಿದ್ದು ನಿಸ್ಸಂಶಯವಾಗಿ ಬಿಸಿಸಿಐ ಅಧ್ಯಕ್ಷರಾಗಿರುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ. ಪಂದ್ಯದುದ್ದಕ್ಕೂ ಪಾದರಸದಂತೆ ಓಡಾಡುತ್ತಿದ್ದರು ಗಂಗೂಲಿ. ಪಂದ್ಯ ನಡೆದ ಮೂರೂ ದಿನವೂ ನೆರೆದಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರೇ ಈ ಯಶಸ್ಸಿಗೆ ಸಾಕ್ಷಿಯಾಗಿದ್ದರು.
ಈ ಯಶಸ್ಸಿನ ಹುಮ್ಮಸ್ಸಿನಲ್ಲಿದ್ದ ಸೌರವ್ ಗಂಗೂಲಿ ಪಿಂಕ್ ಬಾಲ್ ಪಂದ್ಯದ ಮುಂದಿನ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಈ ಯಶಸ್ಸು ಕೇವಲ ಕೋಲ್ಕತ್ತಾದ ಯಶಸ್ಸಲ್ಲ. ಇದು ಇಡೀ ದೇಶದ ಯಶಸ್ಸು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕ್ರೀಡಾಂಗಣಗಳಲ್ಲೂ ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಈ ರೀತಿಯ ನಿರ್ಧಾರದ ಅವಶ್ಯಕತೆ ಖಂಡಿತಾ ಇತ್ತು. ದೇಶದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪ್ರೇಕ್ಷಕರ ಕೊರತೆ ಸಾಕಷ್ಟಿದೆ. ತುಂಬಾ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಆದರೆ ಈ ಪಂದ್ಯ ಟೆಸ್ಟ್ ಪಂದ್ಯ ಅತ್ಯುನ್ನತ ಪ್ರೇಕ್ಷಕ ವರ್ಗವನ್ನು ಹೊಂದಿದ್ದ ಸಂದರ್ಭವನ್ನು ನೆನಪಿಸಿದೆ. 2001ರ ಆಸ್ಟ್ರೇಲಿಯಾ ವಿರುದ್ಧ ನಡದ ಟೆಸ್ಟ್ ಪಂದ್ಯವನ್ನು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದ್ದರು. ವಿರಾಟ್ ಕೊಹ್ಲಿ, ರೋಹಿತ್, ಇಶಾಂತ್ ರಂತಾ ಚಾಂಪಿಯನ್ ಆಟಗಾರರು ಖಾಲಿ ಸ್ಟೇಡಿಯಮ್ ನಲ್ಲಿ ಆಡುವುದನ್ನು ನೋಡಲು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಇವತ್ತು ತುಂಬಾ ಸಂತೋಷಗೊಂಡಿದ್ದೇನೆ ಎಂದು ಗಂಗೂಲಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಪಿಂಕ್ ಬಾಲನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿದ ನಾಲ್ಕು ವರ್ಷಗಳ ಬಳಿಕ ಭಾರತ ಈ ಫಾರ್ಮೆಟ್ನಲ್ಲಿ ಮೊದಲ ಬಾರಿಗೆ ಆಟವಾಡಿದೆ. ಕೇವಲ ಈಡನ್ ಗಾರ್ಡನ್ ಮಾತ್ರವಲ್ಲ ದೇಶದ ಎಲ್ಲಾ ಕ್ರೀಡಾಂಗಣಗಳಲ್ಲೂ ಅಹರ್ನಿಶಿ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುತ್ತೆ ಎಮದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.