ಗೌತಮ್ ಗಂಭೀರ್ ಹೆಡ್ಕೋಚ್ ಆಗಿ ನೇಮಕಗೊಂಡ ನಂತರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಟೆಸ್ಟ್ ಸರಣಿಗಳನ್ನು ಟೀಮ್ ಇಂಡಿಯಾ ಕಳೆದುಕೊಂಡಿದೆ. ಈ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಗೌತಮ್ ಗಂಭೀರ್ ಕೂಡ ಟೀಕೆಗಳನ್ನು ಎದುರಿಸುವಂತಾಗಿದೆ. ಇಂತಹ ಸಂರ್ಭದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ನಂತರ ಗೌತಮ್ ಗಂಭೀರ್ ಭವಿಷ್ಯ ನಿರ್ಧಾರವಾಗಲಿದೆ.
ಭಾರತ ತಂಡ ಟಿ20 ವಿಶ್ವಕಪ್ ಗೆಲುವಿನ ಬಳಿಕ ಹೆಡ್ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದರು. ಈ ಸ್ಥಾನಕ್ಕೆ ಹಲವು ಘಟಾನುಘಟಿಗಳ ಹೆಸರು ಕೇಳಿ ಬಂದಿತ್ತು. ಆದರೆ ಕಳೆದ ವರ್ಷ ಜುಲೈನಲ್ಲಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಗೌತಮ್ ಗಂಭೀರ್ ಅಧಿಕಾರವಧಿಯಲ್ಲಿ ಇಲ್ಲಿವರೆಗೆ ಟೀಮ್ ಇಂಡಿಯಾ 10 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕೇವಲ 4ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇದಲ್ಲದೆ, ಕಳೆದ ವರ್ಷ ಆಡಿದ ಏಕೈಕ ಏಕದಿನ ಸರಣಿಯನ್ನೂ ಶ್ರೀಲಂಕಾ ವಿರುದ್ಧ ಭಾರತ ಸೋತಿತ್ತು. ಹೀಗಾಗಿ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಸಾಧನೆಯೇ ಗಂಭೀರ್ ಅವರ ಮುಂದುವರಿಕೆಗೆ ಮಾನದಂಡವಾಗುವ ಸಾಧ್ಯತೆಯಿದೆ. ಅಲ್ಲದೆ, ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೂ ಈ ಟೂರ್ನಿ ತಂಡದಲ್ಲಿ ಉಳಿಯಲು ಪ್ರಮುಖವಾಗಿದೆ.
ಟಿ20 ವಿಶ್ವಕಪ್ ಬಳಿಕ ಭಾರತ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಹೊಂದಿದೆ. ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಟೀಮ್ ಇಂಡಿಯಾ ಮುಂಚೂಣಿಯಲ್ಲಿದೆ. ಆದರೆ, ಅಂದುಕೊಂಡಂತೆ ನಡೆಯಬೇಕಾದರೆ ಟೀಮ್ ಇಂಡಿಯಾ ಆಟಗಾರರ ಒಗ್ಗಟ್ಟಿನ ಪ್ರದರ್ಶನ ಪ್ರಮುಖವಾಗಿದೆ. ಒಂದು ವೇಳೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಸಾಧನೆ ಮಾಡದಿದ್ದರೆ, ಗಂಭೀರ್ ತಮ್ಮ ಪಟ್ಟವನ್ನು ಕಳೆದುಕೊಳ್ಳಬಹುದು.
ಗೌತಮ್ ಗಂಭೀರ್ ಅವರ ಕಾರ್ಯಾವಧಿಯು 2027ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಇದೆ. ಆದರೆ, ಅವರ ನೇತತ್ವದಲ್ಲಿ ಟೀಮ್ ಇಂಡಿಯಾ ಇಲ್ಲಿವರೆಗೆ ಹೇಳಿಕೊಳ್ಳವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪ್ರದರ್ಶನ ಗಂಭೀರ್ ಉಳಿವಿಗೆ ಕಾರಣವಾಗಲಿದೆ.