ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಹಲವು ಏಳು ಬೀಳುಗಳನ್ನು ಕಂಡಿದೆ. ಸರಣಿಯ ಮಧ್ಯದಲ್ಲಿ ಸ್ಟಾರ್ ಆಪ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರೆ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಚೆನ್ನಾಗಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಗೌತಮ್ ಗಂಭೀರ್ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಚರ್ಚೆಗಳು ಆರಂಭವಾಗಿದ್ದವು. ಈ ವಿಚಾರಗಳಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಬಿಸಿಸಿಐ ನಡೆಸಿದ ರಿವ್ಯೂವ್ ಮೀಟಿಂಗ್ನಲ್ಲಿ ಬಹಿರಂವಾಗಿದೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದ ನಂತರ, ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಕೋಚಿಂಗ್ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಇದೇ ವೇಳೆ ಸೋಲಿಗೆ ಕಾರಣವನ್ನು ಕೇಳಲಾಯಿತು. ಇದೇ ವೇಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಹಲವು ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ. ಇನ್ನು ತಂಡದ ಡ್ರೆಸ್ಸಿಂಗ್ ರೂಮ್ ವಿಚಾರಗಳು ಹೊರಹೋಗುತ್ತಿರುವ ಬಗ್ಗೆಯೂ ಚರ್ಚೆಗಳು ನಡೆದವು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಆ ಯುವ ಆಟಗಾರನತ್ತ ಬೊಟ್ಟು ತೋರಿಸಿದ್ದಾರೆ. ಮಾಧ್ಯಮ ವರದಿಗಳನ್ನು ನಂಬುವುದಾರೆ ಗಂಭೀರ್, ಸರ್ಫರಾಜ್ ಖಾನ್ ವಿರುದ್ಧ ಗಂಭೀರ್ ಆರೋಪವನ್ನು ಮಾಡಿದ್ದಾರೆ. ಡ್ರೆಸ್ಸಿಂಗ್ ರೂಮ್ನ ಖಾಸಗಿ ಚಾಟ್ ಅನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ವ್ಯಕ್ತಿಯ ಹೆಸರು ಸರ್ಫರಾಜ್ ಖಾನ್ ಎಂದು ಟೀಮ್ ಇಂಡಿಯಾದ ಹೆಡ್ ಕೋಚ್ ಹೇಳಿದ್ದಾರೆ. ಈ ಸುದ್ದಿ ಸದ್ಯ ಸಂಚಲನ ಮೂಡಿಸಿದೆ. ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಬಳಿಕ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಬಗ್ಗೆ ಹಲವು ಚರ್ಚೆಗಳು ಎದುರಾಗಿದ್ದವು. ಅಲ್ಲದೆ ಇದೇ ಸುದ್ದಿ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿಯೂ ಆಹಾರವಾಗಿತ್ತು.
ಮೆಲ್ಬೋರ್ನ್ನಲ್ಲಿ ನಡೆದ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ, ಹೆಡ್ ಕೋಚ್ ಗೌತಮ್ ಗಂಭೀರ್ ಆಟಗಾರರಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡರು. ಅಲ್ಲದೆ ಆಟಗಾರರಿಗೆ ನೀತಿ ಪಾಠವನ್ನು ಬೋಧನೆ ಮಾಡಿದರು. ಇನ್ನು ಜಸ್ಪ್ರಿತ್ ಬುಮ್ರಾ ಅವರನ್ನು ನಾಯಕರನ್ನಾಗಿ ಮಾಡಲು ಒಬ್ಬ ಪ್ಲೇಯರ್ ಹಿಂದೇಟು ಹಾಕಿದ ಎಂದು ತಿಳಿದು ಬಂದಿತ್ತು. ಆದರೆ ಆ ಪ್ಲೇಯರ್ ಯಾರು ಎಂಬ ಪ್ರಶ್ನೆ ಇನ್ನು ಸ್ಪಷ್ಟವಾಗಿಲ್ಲ. ಆದರೆ ಈ ಬಗ್ಗೆ ಊಹಾಪೋಹಗಳು ಮಾತ್ರ ಒಬ್ಬ ಪ್ಲೇಯರ್ನತ್ತ ಬೊಟ್ಟು ತೋರಿಸುತ್ತಿವೆ. ಆದರೆ ಆ ಪ್ಲೇಯರ್ ಹೀಗೆ ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲದ ಕಾರಣ ಅವರ ಹೆಸರು ಬಹಿರಂಗವಾಗಿಲ್ಲ.

ಈ ಸನ್ನಿವೇಶಗಳನ್ನು ನೋಡಿದ ನಂತರ ಸಾಮಾಜಿಕ ತಾಣದಲ್ಲಿ ಹಲವು ಚರ್ಚೆಗಳು ಆರಂಭವಾಗಿದ್ದು, ಗೌತಮ್ ಗಂಭೀರ್ ಇರುವವರೆಗೂ ಇನ್ನು ಸರ್ಫರಾಜ್ ಖಾನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.