ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಔಪಚಾರಿಕವಾಗಿ ಸೋಮವಾರ, ಜುಲೈ 22ರಂದು ಅನಾವರಣಗೊಳಿಸಿದೆ.
2024ರ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ನಿರ್ಗಮಿಸುತ್ತಿದ್ದಂತೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ವೈಟ್-ಬಾಲ್ ಪ್ರವಾಸವು ಅವರ ಮೊದಲ ನಿಯೋಜನೆಯಾಗಿದೆ.

ದ್ವೀಪ ರಾಷ್ಟ್ರಕ್ಕೆ ತೆರಳುವ ಮುನ್ನ, ಗೌತಮ್ ಗಂಭೀರ್ ಅವರು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು ಮತ್ತು ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರ ಮೊದಲ ಸುದ್ದಿಗೋಷ್ಠಿಯ ಪ್ರಮುಖ ಮುಖ್ಯಾಂಶಗಳು ಇಲ್ಲಿದೆ.
ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಇಬ್ಬರೂ ಸೂರ್ಯಕುಮಾರ್ ಯಾದವ್ ಅವರ ಹೊಸ ಟಿ20 ನಾಯಕತ್ವ ನೇಮಕದ ಬಗ್ಗೆ ಮಾತನಾಡಿದರು. ನಿರ್ಧಾರ ತೆಗೆದುಕೊಳ್ಳುವ ಮೊದಲು ಇಡೀ ಭಾರತ ತಂಡವನ್ನು ಸಮಾಲೋಚಿಸಲಾಗಿದೆ ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರಿಗೆ ಕೋಚಿಂಗ್ ಸಿಬ್ಬಂದಿಯ ಬೆಂಬಲವಿದೆ ಮತ್ತು 2026ರ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಗುರಿಯಾಗಿದೆ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಭಾರತ ತಂಡದ ಮ್ಯಾನೇಜ್ಮೆಂಟ್ನ ಕಳವಳಕ್ಕೆ ಕಾರಣವಾಗಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ಏಕೆಂದರೆ ತಂಡವು ಯಾವಾಗಲೂ ಲಭ್ಯವಿರುವ ವ್ಯಕ್ತಿಯನ್ನು ಬಯಸುತ್ತದೆ. ಹೀಗಾಗಿ ಹಾರ್ದಿಕ್ ಪಾಂಡ್ಯರನ್ನು ಟಿ20 ತಂಡದ ನಾಯಕರನ್ನಾಗಿ ಮಾಡಲಾಗಲಿಲ್ಲ ಎಂದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಗೌತಮ್ ಗಂಭೀರ್ ಅವರನ್ನು ಪ್ರಶ್ನಿಸಿದಾಗ, ಇಬ್ಬರೂ ಆಟಗಾರರು ಚಾಂಪಿಯನ್ಗಳು ಮತ್ತು ಫಿಟ್ನೆಸ್ ಇದ್ದರೆ, ಅವರು 2027ರ ವಿಶ್ವಕಪ್ನಲ್ಲಿ ಭಾಗವಹಿಸುತ್ತಾರೆ ಎಂದು ಬಹಿರಂಗಪಡಿಸಿದರು.
ವಿರಾಟ್ ಕೊಹ್ಲಿ ಅವರೊಂದಿಗಿನ ವಿವಾದಿತ ಸಂಬಂಧದ ಬಗ್ಗೆ ಗೌತಮ್ ಗಂಭೀರ್ ಅವರನ್ನು ಕೇಳಲಾಯಿತು. ಅವರು ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ ಮತ್ತು ತಮ್ಮ ಸಂಬಂಧವು ಟಿಆರ್ಪಿಗಾಗಿ ಅಲ್ಲ ಎಂದು ಹೇಳಿದರು.
ಅಲ್ಲದೆ, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಸಾಕಷ್ಟು ಸಂದೇಶಗಳನ್ನು ಹಂಚಿಕೊಂಡಿದ್ದಾರೆ ಮತ್ತು ಭಾರತೀಯ ಕ್ರಿಕೆಟ್ನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಇಬ್ಬರೂ ಶುಭ್ಮನ್ ಗಿಲ್ ಅವರನ್ನು 3 ಫಾರ್ಮ್ಯಾಟ್ ಆಟಗಾರ ಎಂದು ಒಪ್ಪಿಕೊಂಡರು. ಶುಭ್ಮನ್ ಗಿಲ್ರನ್ನು ಭಾರತೀಯ ಕ್ರಿಕೆಟ್ನ ಭವಿಷ್ಯದಂತೆ ನೋಡುತ್ತಾರೆ. ಅಜಿತ್ ಅಗರ್ಕರ್ ಅವರು ಶುಭ್ಮನ್ ಗಿಲ್ ಅವರನ್ನು ಭಾರತ ತಂಡದ ಭವಿಷ್ಯದ ನಾಯಕ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಭಾರತ ತಂಡಕ್ಕೆ ತೀವ್ರವಾದ ಟೆಸ್ಟ್ ವೇಳಾಪಟ್ಟಿ ಕಾಯುತ್ತಿರುವ ಕಾರಣ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡದೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿಯು ಆದ್ಯತೆ ನೀಡಿದೆ.
ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡಲಾಗಿಲ್ಲ, ವಿಶ್ರಾಂತಿ ನೀಡಲಾಗಿದೆ ಎಂದು ಅಜಿತ್ ಅಗರ್ಕರ್ ಖಚಿತಪಡಿಸಿದರು.
2023ರ ಏಕದಿನ ವಿಶ್ವಕಪ್ ನಂತರ ಮೊಹಮ್ಮದ್ ಶಮಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಏಕದಿನ ವಿಶ್ವಕಪ್ನಲ್ಲಿ ಪ್ರಭಾವಶಾಲಿ ಬೌಲಿಂಗ್ ಪ್ರದರ್ಶನ ನೀಡಿದರು ಮತ್ತು ಆಡಿದ ಏಳು ಪಂದ್ಯಗಳಲ್ಲಿ 24 ವಿಕೆಟ್ಗಳೊಂದಿಗೆ ಪಂದ್ಯಾವಳಿಯ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು. ಇದು ಭಾರತ ತಂಡಕ್ಕೆ ಅವರ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಮೊಹ್ಮಮದ್ ಶಮಿ ಚೇತರಿಕೆಯ ಕುರಿತು ಆಯ್ಕೆಗಾರರು ನವೀಕರಣ ಒದಗಿಸಿದ್ದಾರೆ.
"ಈ ಸಮಯದಲ್ಲಿ ಕೆಲವು ಗಾಯಗೊಂಡ ಆಟಗಾರರಿದ್ದಾರೆ ಮತ್ತು ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ. ಮೊಹಮ್ಮದ್ ಶಮಿ ಬೌಲ್ ಮಾಡಲು ಪ್ರಾರಂಭಿಸಿದ್ದಾರೆ, ಇದು ಒಳ್ಳೆಯ ಸೂಚನೆಯಾಗಿದೆ. ಸೆಪ್ಟೆಂಬರ್ 19ರಂದು ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಯಾವಾಗಲೂ ಗುರಿಯಾಗಿದೆ. ಚೇತರಿಸಿಕೊಳ್ಳಲು ಅದು ಅವರ ಟೈಮ್ಲೈನ್ ಆಗಿದೆಯೇ ಎಂದು ನನಗೆ ತಿಳಿದಿಲ್ಲ. ಅದರ ಬಗ್ಗೆ ಎನ್ಸಿಎಯಲ್ಲಿರುವ ಹುಡುಗರನ್ನು ಕೇಳಬೇಕಾಗುತ್ತದೆ," ಎಂದು ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.