ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನ ಮಂಕಾಗಿತ್ತು. ಟಾಪ್ ಆರ್ಡರ್ ಬ್ಯಾಟರ್ಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಸರಣಿ ಸೋಲಿನ ಬಳಿಕ ಇತ್ತೀಚೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೆಡ್ ಕೋಚ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಸಮ್ಮುಖದಲ್ಲಿ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ಅಚ್ಚರಿಯ ಸುದ್ದಿಯೊಂದು ಹೊರ ಬಂದಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡದ ಮೇಲೆ ಗೆಲ್ಲಲೇಬೇಕಾದ ಒತ್ತಡವಿತ್ತು. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಲು ವಿಫಲವಾಯಿತು. ಪರಿಣಾಮ ಸರಣಿಯಲ್ಲಿ 1-3 ಅಂತರದ ಸೋಲನ್ನು ಎದುರಿಸಬೇಕಾಯಿತು. ಈ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗಳು ನಡೆದವು. ಆದರೆ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ನಿರಾಕರಿಸಿದರು. ಇದೀಗ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಂಭೀರ್ ಮತ್ತು ಮೋರ್ನೆ ಮೊರ್ಕೆಲ್ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವರದಿಗಳಾಗಿವೆ.

ವರದಿಗಳ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಶಿಬರಕ್ಕೆ ಮೋರ್ನೆ ಮೊರ್ಕೆಲ್ ತಡವಾಗಿ ಬರುತ್ತಿದ್ದರು. ಇದಕ್ಕೆ ಮೋರ್ನೆ ಮೊರ್ಕೆಲ್ ಮೇಲೆ ಗಂಭೀರ್ ಕೋಪಗೊಂಡಿದ್ದರು. ಹೀಗಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಈ ವಿಚಾರ ಕೂಡ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಮನಕ್ಕೂ ಗಂಭೀರ್ ತಂದಿದ್ದಾರೆ.
ಗಂಭೀರ್ ಶಿಸ್ತಿನ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಹೀಗಾಗಿ ಮೊರ್ಕೆಲ್ ಅವರನ್ನು ಮೈದಾನದಲ್ಲಿಯೇ ಗಂಭೀರ್ ಖಂಡಿಸಿದ್ದಾರೆ. ಪರಿಣಾಮ ಆಸ್ಟ್ರೇಲಿಯಾ ಪ್ರವಾಸದ ಉಳಿದ ದಿನಗಳಲ್ಲಿ ಮಾರ್ನೆ ಮಾರ್ಕೆಲ್ ಅವರು ತಮ್ಮದೇ ಪ್ರಪಂಚದಲ್ಲಿ ಇರುತ್ತಿದ್ದರು ಎಂದು ಬಿಸಿಸಿಐ ಮೂಲವೊಂದು ಮಾಹಿತಿ ನೀಡಿದೆ. ಇದೀಗ ಭಾರತ ತಂಡವು ಸುಗಮವಾಗಿ ಸಾಗಲು ಗಂಭೀರ್ ಮತ್ತು ಮೋರ್ನೆ ಮೊರ್ಕೆಲ್ ಇಬ್ಬರೂ ಮನಸ್ತಾಪ ಬಿಟ್ಟು ಮೊದಲಿನಂತೆ ಸರಿ ಆಗಬೇಕಾಗಿದೆ.
ಟೀಮ್ ಇಂಡಿಯಾ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಕೇಟ್ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಅನುಭವದ ಕೊರತೆಯು ತಂಡದ ಪ್ರದರ್ಶನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅಡ್ಡಿಯಾಗಿದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಹಾಯಕ ಕೋಚ್ಗಳನ್ನು ವಜಾಗೊಳಿಸುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಗಳು ಹೇಳಿವೆ.