ಆಧುನಿಕ ಕ್ರಿಕೆಟ್ ಯುಗದಲ್ಲಿ ಫಿಟ್ನೆಸ್ನ ಪ್ರಾಮುಖ್ಯತೆಯ ಕುರಿತು ಚರ್ಚೆಗಳು ನಡೆಯುತ್ತಿದ್ದಂತೆ, ಭಾರತದ ಮಾಜಿ ಕ್ರಿಕೆಟಿಗ ಹಾಗೂ ಭಾರತ ತಂಡದ ಸಂಭಾವ್ಯ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಬಹಳ ಪ್ರಸಿದ್ಧವಾದ ಯೋ-ಯೋ ಟೆಸ್ಟ್ ಅನ್ನು ಟೀಕಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಭಾರತ ತಂಡದ ಆಯ್ಕೆಯಲ್ಲಿ ಯೋ-ಯೋ ಟೆಸ್ಟ್ ಎಂದು ಕರೆಯಲಾಗುವ ಮಾನದಂಡದ ದೊಡ್ಡ ಅಭಿಮಾನಿಯಲ್ಲ ಎಂದು ಗೌತಮ್ ಗಂಭೀರ್ ಬಹಿರಂಗವಾಗಿ ಹೇಳಿದ್ದಾರೆ.

ಎರಡು ಬಾರಿ ವಿಶ್ವಕಪ್ ವಿಜೇತರಾಗಿರುವ ಗೌತಮ್ ಗಂಭೀರ್, ಆಟಗಾರರ ಏರೋಬಿಕ್ ಸಹಿಷ್ಣುತೆ ಮತ್ತು ಫಿಟ್ನೆಸ್ ಮಟ್ಟವನ್ನು ನಿರ್ಧರಿಸಲು ಯೋ-ಯೋ ಟೆಸ್ಟ್ನ ಅಗತ್ಯವನ್ನು ಪ್ರಶ್ನಿಸಿದರು. ಆಟಗಾರರನ್ನು ಪ್ರತಿಭೆಯ ಆಧಾರದ ಮೇಲೆ ಆಯ್ಕೆ ಮಾಡಬೇಕು, ದೈಹಿಕ ಸಾಮರ್ಥ್ಯವಲ್ಲ ಎಂದು ತಿಳಿಸಿದರು.
ಆದಾಗ್ಯೂ, ಭಾರತೀಯ ಮಾಜಿ ಬ್ಯಾಟರ್ ಕ್ರಿಕೆಟ್ನಲ್ಲಿ ನಿಸ್ಸಂದೇಹವಾಗಿ ಫಿಟ್ನೆಸ್ ಮುಖ್ಯವಾಗಿದೆ ಎಂದು ಒಪ್ಪಿಕೊಂಡರು. ಆದರೆ ತಂಡಕ್ಕೆ ಆಟಗಾರನ ಸೂಕ್ತತೆಯನ್ನು ನಿರ್ಧರಿಸುವ ಏಕೈಕ ಮಾನದಂಡವಾಗಿರಬಾರದು. ಆಟಗಾರರ ಒಟ್ಟಾರೆ ಫಿಟ್ನೆಸ್ ಮೌಲ್ಯಮಾಪನ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಕೋಚ್ಗಳಿಗೆ ನೀಡಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
ಭಾರತದ ಸಂಭಾವ್ಯ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರು ಸ್ಪೋರ್ಟ್ಸ್ಕೀಡಾದೊಂದಿಗೆ ಮಾತನಾಡಿ, "ಫಿಟ್ನೆಸ್ ಒಂದು ಅಂಶವಾಗಿರಬೇಕು. ಆದರೆ ನಾವು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ನಾನು ಒಪ್ಪುವುದಿಲ್ಲ. ಫಿಟ್ನೆಸ್ ನೇರವಾಗಿ ಕೋಚ್ಗೆ ಸಂಬಂಧಿಸಿರಬೇಕು. ಆಟಗಾರ ಸಾಕಷ್ಟು ಫಿಟ್ ಆಗಿದ್ದೀರಿ ಎಂದು ಕೋಚ್ ಭಾವಿಸಬೇಕು," ಎಂದರು.
"ಕೆಲವು ಜನರು ಜಿಮ್ನಲ್ಲಿ ಹೆಚ್ಚಿನ ಭಾರ ಎತ್ತುವ ದೃಷ್ಟಿಯಿಂದ ದೈಹಿಕವಾಗಿ ಬಲಶಾಲಿಯಾಗಿರುತ್ತಾರೆ. ಇನ್ನು ಕೆಲವು ವಿಭಿನ್ನ ಆಟಗಾರರು ದೈಹಿಕ ಪ್ರದರ್ಶನದ ವಿವಿಧ ಅಂಶಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
ಮತ್ತಷ್ಟು ವಿವರಿಸಿದ ಅವರು, "ಕೆಲವರ ಸಹಿಷ್ಣುತೆ ಚೆನ್ನಾಗಿರಲ್ಲ, ಕೆಲವರ ಸಹಿಷ್ಣುತೆ ಚೆನ್ನಾಗಿರುತ್ತದೆ. ಆದರೆ ಅವರು ಜಿಮ್ನಲ್ಲಿ ದುರ್ಬಲರು, ಭಾರ ಎತ್ತುವಲ್ಲಿ ದುರ್ಬಲರು, ಶಕ್ತಿಯಲ್ಲಿ ದುರ್ಬಲರಾಗಿರುತ್ತಾರೆ. ಹೀಗಾಗಿ, ಯಾರು ಫಿಟ್ ಮತ್ತು ಯಾರು ಫಿಟ್ ಅಲ್ಲ ಎಂಬುದನ್ನು ಟ್ರೈನರ್ ನಿರ್ಧರಿಸಬೇಕು ಎಂದು ನಾನು ಭಾವಿಸುತ್ತೇನೆ. ಯೋ-ಯೋ ಟೆಸ್ಟ್ ಅಲ್ಲ. ಯಾವುದೂ ಮಾನದಂಡವಾಗಬಾರದು," ಎಂದು ತಿಳಿಸಿದರು.
"ನಾನೂ ಅದನ್ನು ಒಪ್ಪುವುದಿಲ್ಲ. ಕೆಲವರಿಗೆ ಯೋ-ಯೋ ಟೆಸ್ಟ್ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಜಿಮ್ನಲ್ಲಿ ತೂಕ ಎತ್ತಲು ಸಾಧ್ಯವಾಗದಿರಬಹುದು ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಅವರು ದೈಹಿಕವಾಗಿ ಬಲಶಾಲಿ ಎಂದು ಅರ್ಥವಲ್ಲ. ಸಹಿಷ್ಣುತೆಯ ದೃಷ್ಟಿಕೋನದಿಂದ, ನಾನು ಬಲಶಾಲಿ. ದುರ್ಬಲ ಆಟಗಾರರನ್ನು ಸುಧಾರಿಸುವುದು ಕೋಚ್ನ ಪ್ರಮುಖ ಪಾತ್ರವಾಗಿದೆ," ಎಂದು ಗೌತಮ್ ಗಂಭೀರ್ ಹೇಳಿದರು.
ಇದೇ ವೇಳೆ, ಯೋ-ಯೋ ಟೆಸ್ಟ್ ಅನ್ನು ರಾಷ್ಟ್ರೀಯ ತಂಡದ ಆಯ್ಕೆಗೆ ಮಾನದಂಡವಾಗಿ ಬಳಸುವುದರ ಬಗ್ಗೆ ಗೌತಮ್ ಗಂಭೀರ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ, ಇದು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಅನ್ಯಾಯವಾಗಿ ದಂಡ ವಿಧಿಸುತ್ತದೆ ಎಂದು ಹೇಳಿದರು.
ಆಯ್ಕೆ ಮಾನದಂಡಗಳ ಮರು ಮೌಲ್ಯಮಾಪನಕ್ಕೆ ಕರೆ ನೀಡಿದ ಗೌತಮ್ ಗಂಭೀರ್, ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಫಿಟ್ನೆಸ್ ಮಾನದಂಡಗಳಿಗಿಂತ ಕೌಶಲ್ಯ ಮತ್ತು ಪ್ರತಿಭೆಯ ಮೇಲೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.