ಆತನನ್ನು ವಾಪಾಸ್ ಕಳಿಸಿ, ಟಿ20ಗೆ ಮಾತ್ರ ಆತ ಫಿಟ್: ಭರವಸೆ ಮೂಡಿಸಿದ್ದ ಆಟಗಾರನ ಬಗ್ಗೆ ಗಂಭೀರ್ ಕಿಡಿ

ಭಾರತ ದಕ್ಷಿಣ ಆಪ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಅಂತ್ಯವಾಗಿದ್ದು ಎರಡು ಸರಣಿಯಲ್ಲಿಯೂ ಭಾರತ ನಿರಾಸೆ ಅನುಭವಿಸಿದೆ. ಟೆಸ್ಟ್ ಸರಣಿಯಲ್ಲಿ 1-2 ಅಂತರದ ಸೋಲು ಕಂಡಿದ್ದರೆ ಏಕದಿನ ಸರಣಿಯಲ್ಲಿ ಒಂದು ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಾಗದೆ ವೈಟ್ವಾಶ್ ಅವಮಾನಕ್ಕೆ ತಂಡ ತುತ್ತಾಗಿದೆ. ಈ ಸರಣಿಯ ಅಂತ್ಯದ ಬಳಿಕ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದ್ದು ಕ್ರಿಕೆಟ್ ಪಂಡಿತರು ಈ ವಿಚಾರವಾಗಿ ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಭಾರತದ ಈ ಪ್ರವಾಸದ ಹಿನ್ನಡೆಯ ಕುರಿತಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ್ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಸ್ಥಾನವನ್ನು ಪಡೆದ ಯುವ ಭರವಸೆಯ ಆಟಗಾರನ ಬಗ್ಗೆ ತಮ್ಮ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಗೌತಮ್ ಗಂಭೀರ್ಗೆ ನಿರಾಸೆ ಮೂಡಿಸಿದ ಆ ಆಟಗಾರ ಯಾರು? ಮುಂದೆ ಓದಿ..

ಏಕದಿನ ತಂಡಕ್ಕೆ ವೆಂಕಟೇಶ್ ಐಯ್ಯರ್ ಸೂಕ್ತವಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶವನ್ನು ಪಡೆದ ಯುವ ಆಟಗಾರ ವೆಂಕಟೇಶ್ ಅಯ್ಯರ್ ಬಗ್ಗೆಯೇ ಗೌತಮ್ ಗಂಭೀರ್ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಏಕದಿನ ಮಾದರಿಗೆ ವೆಂಕಟೇಶ್ ಐಯ್ಯರ್ ಅವರನ್ನು ಪರಿಗಣಿಸಬಾರದು ಕೇವಲ ಟಿ20 ಮಾದರಿಗೆ ಮಾತ್ರವೇ ಆತನನ್ನು ಪರಿಗಣಿಸಬೇಕು ಎಂದು ಗಂಭೀರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಳೆದ ಟಿ20 ವಿಶ್ವಕಪ್ನ ನಂತರ ಹಾರ್ದಿಕ್ ಪಾಂಡ್ಯ ಗಾಯದಿಂದ ಹೊರಗುಳಿದ ಬಳಿಕ ವೆಂಕಟೇಶ್ ಐಯ್ಯರ್ ಹಾರ್ದಿಕ್ ಸ್ಥಾನ ತುಂಬಲು ಸೂಕ್ತ ಆಟಗಾರ ಎಂದು ಬಿಂಬಿತವಾಗಿದ್ದರು.

ಏಕದಿನ ಮಾದರಿಗೆ ಬೇಕಾದ ಪ್ರಬುದ್ಧತೆ ಇಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ ಗೌತಮ್ ಗಂಭೀರ್ ವೆಂಕಟೇಶ್ ಐಯ್ಯರ್ ಪ್ರದರ್ಶನದ ಬಗ್ಗೆ ಮಾತನಾಡಿದರು. ವೆಂಕಟೇಶ್ ಐಯ್ಯರ್ ಅವರನ್ನು ಏಕದಿನ ಮಾದರಿಗೂ ಅಗತ್ಯವಿರುವ ಪ್ರಬುದ್ಧತೆಯಿಲ್ಲ. ಹಾಗಾಗಿ ಅವರನ್ನು ಟಿ20 ಮಾದರಿಗೆ ಮಾತ್ರವೇ ಪರಿಗಣಿಸಬೇಕು ಎಂದಿದ್ದಾರೆ.

ಟಿ20 ಮಾದರಿಗೆ ಮಾತ್ರವೇ ಪರಿಗಣಿಸಿ
"ನನ್ನ ಪ್ರಕಾರ ಆತನನ್ನು ಟಿ20 ಮಾದರಿಗೆ ಮಾತ್ರವೇ ಪರಿಗಣಿಸಬೇಕು. ಯಾಕೆಂದರೆ ಆತನನ್ನು ಏಕದಿನ ಮಾದರಿಯಲ್ಲಿ ಆಡುವಷ್ಟು ಪ್ರಬುದ್ಧತೆ ಇನ್ನೂ ಬಂದಿಲ್ಲ. 7-8 ಐಪಿಎಲ್ ಪಂದ್ಯಗಳಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಮಾತ್ರವೇ ಆತನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ದೊರೆತಿದೆ. ನೀವು ಐಪಿಎಲ್ ಪ್ರದರ್ಶನವನ್ನು ಪರಿಗಳಿಸುತ್ತೀರಾದರೆ ಆತನನ್ನು ಟಿ20 ಮಾದರೊಯ್ಲಲಿ ಮಾತ್ರವೇ ಆಡಿಸಿ. ಏಕದಿನ ಕ್ರಿಕೆಟ್ ಸಂಪೂರ್ಣ ವಿಭಿನ್ನವಾದ ಕ್ರಿಕೆಟ್ ಆಗಿದೆ" ಎಂದು ಗೌತಮ್ ಗಂಭೀರ್ ಖಡಕ್ಕಾಗಿ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಫ್ರಾಂಚೈಸಿಗೆ ಸೂಚನೆ ನೀಡಿ
ಇನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಯುವ ಆಟಗಾರ ವೆಂಕಟೇಶ್ ಐಯ್ಯರ್ ಅವರನ್ನು ಏಕದಿನ ಮಾದರಿಯಲ್ಲಿ ಮುಂದುವರಿಸಲು ಬಯಸುವುದಾದರೆ ಆತನನ್ನು ಐಪಿಎಲ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿಸುವಂತೆ ಆತ ಪ್ರತಿನಿಧಿಸುವ ಫ್ರಾಂಚೈಸಿಗೆ ಬಿಸಿಸಿಐ ಸೂಚನೆ ನೀಡಬೇಕಿದೆ ಎಂದಿದ್ದಾರೆ. "ವೆಂಕಟೇಶ್ ಐಯ್ಯರ್ ಐಪಿಎಲ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಇಲ್ಲಿ ಆತ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆತನನ್ನು ವಾಪಾಸ್ ಕಳುಹಿಸಿ. ಆತನನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಬಯಸುತ್ತಿದ್ದೀರಿ ಎಂದಾದರೆ ಆತನನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಐಪಿಎಲ್ ಫ್ರಾಚೈಸಿಗೆ ಸೂಚಿಸಿ. ಆದರೆ ನನ್ನ ಪ್ರಕಾರ ಆತ ಕೇವಲ ಟಿ20 ಕ್ರಿಕೆಟ್ಗೆ ಮಾತ್ರವೇ ಸೂಕ್ತವಾದ ಆಟಗಾರ. ಅದು ಕೂಡ ಆರಂಭಿಕ ಆಟಗಾರನಾಗಿ ಮಾತ್ರ" ಎಂದು ಗೌತಮ್ ಗಂಭೀರ್ ಭಾರತೀಯ ತಂಡದ ಯುವ ಆಟಗಾರನ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications