ನವದೆಹಲಿ, ಸೆ. 05: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾದ ಎಎಸ್ ಐ ಅಬ್ದುಲ್ ರಶೀದ್ ಅವರ ಮಗಳು ಕಣ್ಣೀರಿಡುವ ದೃಶ್ಯ ಎಲ್ಲರ ಮನ ಕಲುಕಿತ್ತು. ಮಾನವೀಯತೆ, ಸಾಮಾಜಿಕ ಕಳಕಳಿಗೆ ಹೆಸರಾಗಿರುವ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಈ ಬಾಲಕಿಯ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆಕೆಯ ಶಿಕ್ಷಣದ ಹೊಣೆ ಹೊತ್ತುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಕಾಶ್ಮೀರದ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ) ಅಬ್ದುಲ್ ರಶೀದ್ ಅವರು ಹುತಾತ್ಮರಾಗಿದ್ದರು.

ರಶೀದ್ ಅವರ ಮಗಳು ಜೋಹ್ರಾಳನ್ನು ಭಾರತದ ಮಗಳು ಎಂದು ಕರೆದಿರುವ ಗಂಭೀರ್, ಆಕೆಯ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಗಳಲ್ಲಿ ಭಾವನಾತ್ಮಕ ಸಂದೇಶವನ್ನು ಹಾಕಿದ್ದಾರೆ.
'ಜೋಹ್ರಾ, ಜೋಗುಳ ಹಾಡಿ ನಾನು ನಿನ್ನನ್ನು ಮಲಗಿಸಲಾರೆ. ಆದರೆ, ನೀನು ಕಣ್ತೆರೆದು ನಿನ್ನ ಕನಸುಗಳನ್ನು ಸಾಕಾರಗೊಳಿಸುವ ಸಲುವಾಗಿ ಎಚ್ಚರವಾಗಿರಲು ನಾನು ನೆರವಾಗಬಲ್ಲೆ. ಜೀವನಪರ್ಯಂತ ನಿನ್ನ ಶಿಕ್ಷಣಕ್ಕೆ ಬೆಂಬಲ ನೀಡುವೆ' ಎಂದು 'ಡಾಟರ್ ಆಫ್ ಇಂಡಿಯಾ' ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ : 'ದಯವಿಟ್ಟು ನಿನ್ನ ಕಣ್ಣಿರಿನ ಹನಿಯನ್ನು ಕೆಳಗೆ ಬೀಳಲು ಬಿಡಬೇಡ. ನಿನ್ನ ನೋವಿನ ಭಾರವನ್ನು ತಡೆಯಲು ಭೂಮಿ ತಾಯಿಗೂ ಸಾಧ್ಯವಾಗುವ ಬಗ್ಗೆ ನನಗೆ ಅನುಮಾನವಿದೆ. ನಿನ್ನ ತಂದೆ, ಹುತಾತ್ಮ ಎಎಸ್ ಐ ಅಬ್ದುಲ್ ರಶೀದ್ ಅವರಿಗೆ ನಮನಗಳು' ಎಂದಿದ್ದಾರೆ.
ಈ ಹಿಂದೆ ಛತ್ತೀಸ್ ಗಢದಲ್ಲಿ ನಕ್ಸಲ್ ದಾಳಿಗೆ ಸಿಲುಕಿ ಹುತಾತ್ಮರಾದ 25 ಯೋಧರ ಕುಟುಂಬಕ್ಕೂ ಗೌತಮ್ ಗಂಭೀರ್ ನೆರವಾಗಿದ್ದರು. ಯೋಧರ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಮುಂದಾಗಿದ್ದರು. ಗೌತಮ್ ಗಂಭೀರ್ ಸಂಸ್ಥೆ ಮೂಲಕ, ಶಿಕ್ಷಣ, ನಿರ್ಗತಿಕರಿಗೆ ಆಹಾರ ಒದಗಿಸುವ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.