ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ನಂತರ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ ಟೀಮ್ ಇಂಡಿಯಾ ಆಟಗಾರರ ಕುಟುಂಬಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲಿದೆ. ಈ ನಿಯಮದ ಪ್ರಕಾರ ಆಟಗಾರರು ಯಾವುದೇ ವಿದೇಶಿ ಪ್ರವಾಸದಲ್ಲಿ ತಮ್ಮ ಕುಟುಂಬದೊಂದಿಗೆ ಕೇವಲ 14 ದಿನಗಳ ಕಾಲ ಉಳಿಯಲು ಅವಕಾಶವನ್ನು ಪಡೆಯಲಿದ್ದಾರೆ. ಆದರೆ ಇದು ಬಿಸಿಸಿಐ ನಿರ್ಧಾರವಲ್ಲ, ಹೆಡ್ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರ ಎಂಬುದು ಬಹಿರಂಗವಾಗಿದೆ. ಜನವರಿ 11 ರಂದು ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಂಭೀರ್ ಹಾಗೂ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವರದಿಯೊಂದರಲ್ಲಿ ಬಹಿರಂಗವಾಗಿದೆ. ಇದಕ್ಕೆ ಕಾರಣ ಶಿಸ್ತು, ತಡವಾಗಿ ಸೇರಿದ್ದಕ್ಕಾಗಿ ಗಂಭೀರ್ ಮೊರ್ಕೆಲ್ ಮೇಲೆ ಕೋಪಗೊಂಡಿದ್ದರು. ಆಟಗಾರರ ವಿಚಾರದಲ್ಲೂ ಇದೇ ವಿಚಾರ ಬೆಳಕಿಗೆ ಬಂದಿದೆ. ಆಟಗಾರರಲ್ಲಿ ಶಿಸ್ತಿನ ಕೊರತೆಯಿಂದಾಗಿ ಗಂಭೀರ್ ಬಿಸಿಸಿಐಗೆ ಈ ನಿಯಮವನ್ನು ಜಾರಿಗೆ ತರಲು ಕೋರಿದ್ದಾರೆ.

ಭಾರತ ತಂಡದಲ್ಲಿನ ಅಶಿಸ್ತನ್ನು ಬೇರು ಸಮೇತ ಕಿತ್ತೊಗೆಯಲು ಗಂಭೀರ್ ಸಂಕಲ್ಪ ಮಾಡಿದ್ದಾರೆ. ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಗೌತಮ್ ಗಂಭೀರ್ ಬಾರ್ಡರ್-ಗವಾಸ್ಕರ್ ಸರಣಿಯ ಸೋಲಿನ ನಂತರ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿನ ಅಶಿಸ್ತಿನ ಬಗ್ಗೆ ಮಾತನಾಡಿದ್ದಾರೆ. ಅಶಿಸ್ತಿನ ಕಾರಣ ಬಿಸಿಸಿಐ ಕೋವಿಡ್-19 ಪೂರ್ವ ನಿಯಮಗಳಿಗೆ ಮರಳುತ್ತಿದೆ. ಪ್ರವಾಸದ ವೇಳೆ ಎರಡು ವಾರಗಳ ಕಾಲ ಕುಟುಂಬದೊಂದಿಗೆ ಇರಲು ಅನುಮತಿ ನೀಡಲಾಗಿದೆ. ಕುಟುಂಬದೊಂದಿಗೆ ಉಳಿದಕೊಳ್ಳುವ ವಿಷಯದಲ್ಲಿ ಗೌತಮ್ ಗಂಭೀರ್ ಮತ್ತು ಆಟಗಾರರು ಒಮ್ಮತದಿಂದ ಇದ್ದರು. ಆದರೆ ಇದೀಗ ಅತಿಯಾದರೆ ಅಮೃತವೂ ವಿಷ ಎಂಬಂತೆ ಟೀಮ್ ಇಂಡಿಯಾದಲ್ಲಿ ಅಶಿಸ್ತು ತುಂಬಿ ತುಳುಕುತ್ತಿದೆ.
ಕಿರಿಯ ಆಟಗಾರರ ಮೇಲೂ ಇಂತಹ ಟ್ಟುನಿಟ್ಟಿನ ನಿಯಮಗಳನ್ನು ಹೇರುವಂತೆ ಗಂಭೀರ್ ಅವರು ಬಿಸಿಸಿಐಗೆ ಸಲಹೆ ನೀಡಿದ್ದಾರೆ. ವರದಿಗಳ ಪ್ರಕಾರ, ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಹಲವು ಹಿರಿಯ ಮತ್ತು ಕಿರಿಯ ಕ್ರಿಕೆಟಿಗರು ರಾತ್ರಿ ಊಟಕ್ಕೆ ಹೋಗಿದ್ದರು. ಈ ವೇಳೆ ಕೇವಲ ಒಂದು ತಂಡದ ಭೋಜನಕೂಟ ಮಾತ್ರ ನಡೆದಿದೆ. ಇದು ಗೌತಮ್ ಅವರ ತಾಳ್ಮೆಯ ಕಟ್ಟೆ ಹೊಡೆಯುವಂತೆ ಮಾಡಿದೆ.
ಪಂದ್ಯದ ಸಂಭಾವನೆಯನ್ನು ತಕ್ಷಣವೇ ವಿತರಿಸಬಾರದು ಎಂದು ಸಭೆಯಲ್ಲಿದ್ದ ಹಿರಿಯ ಆಟಗಾರರೊಬ್ಬರು ಬಿಸಿಸಿಐಗೆ ಸೂಚಿಸಿದ್ದಾರೆ. ಬದಲಾಗಿ, ಕೆಲವು ಆಟಗಾರರು ದೇಶೀಯ ಮತ್ತು ರಾಷ್ಟ್ರೀಯ ತಂಡದ ಬದ್ಧತೆಗಳಿಗೆ ಆದ್ಯತೆ ನೀಡದ ಕಾರಣ, ಸಂಭಾವನೆಯನ್ನು ವಿತರಿಸುವ ಮೊದಲು ಆಟಗಾರರ ಪ್ರದರ್ಶನವನ್ನು ಪರಿಗಣಿಸಬೇಕು.
ಇತ್ತೀಚೆಗೆ ಕೆಲವು ಸರಣಿಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸುತ್ತಿರುವುದು ಕಂಡುಬರುತ್ತಿದೆ. ಇದು ಕೂಡ ಟೀಮ್ ಇಂಡಿಯಾದಲ್ಲಿ ಅಶಿಸ್ತು ಮೂಡಲು ಕಾರಣವಾಗಿದೆ. ಹೀಗಾಗಿ ಇನ್ನೂ ಮುಂದೆ ಯಾವುದೇ ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸುವಂತಿಲ್ಲ. ತಂಡದ ಬಸ್ ಮೂಲಕವೇ ಎಲ್ಲಾ ಆಟಗಾರರು ಒಟ್ಟಿಗೆ ಪ್ರಯಾಣಿಸಬೇಕಾಗಿದೆ.