
ಯಶಸ್ವಿ ಟಿ20 ಬ್ಯಾಟಿಂಗ್ ತರಬೇತುದಾರನಾಗಲು ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಅನಿವಾರ್ಯವಲ್ಲ ಎಂದು ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಆಟಗಾರನಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುವ ಸಾಮರ್ಥ್ಯ ಕೋಚ್ನಲ್ಲಿ ಇರಬೇಕೆಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರಷ್ಟೆ ಕೋಚ್ ಆಗಿ ಯಶಸ್ವಿಯಾಗಲು ಸಾಧ್ಯವಿಲ್ಲ. ಸಾಕಷ್ಟು ಕ್ರಿಕೆಟ್ ಆಡದೆಯೂ ಯಶಸ್ವಿ ತರಬೇತುದಾರನಾಗಲು ಸಾಧ್ಯವಿದೆ. ಆಟಗಾರರಲ್ಲಿ ಉತ್ತೇಜನ ನೀಡುವ ಕಾರ್ಯ ಕೋಚ್ ಗಳ ಕೆಲಸವಾಗಿದೆ ಎಂದು ಖಾಸಗೀ ವಾಹಿನಿಯ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
ಟಿ20 ಮಾದರಿಯಲ್ಲಿ ತರಬೇತುದಾರ ಆಟಗಾರನ ಮನಸ್ಥಿತಿಯನ್ನು ಮುಕ್ತಗೊಳಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಆದು ಆಟಗಾರನಿಗೆ ಮಾನಸಿಕವಾಗಿ ಬೆಂಬಲವನ್ನು ನೀಡುತ್ತದೆ. ಇದರಿಂದಾಗಿ ದೊಡ್ಡ ಹೊಡೆತಗಳನ್ನು ಬಾರಿಸಲು ಆಟಗಾರ ಮಾನಸಿಕವಾಗಿ ಸಿದ್ದನಾಗುತ್ತಾನೆ ಎಂದು ಗಂಭೀರ್ ಹೇಳಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಕೋಚ್ ಹೊಡೆತಗಳನ್ನು ಹೇಗೆ ಬಾರಿಸಬೇಕೆಂದು ಕಲಿಸುವ ಕೆಲಸವನ್ನು ಮಾಡಬಾರದು. ಆತನನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು. ಅದರಿಂದಾಗಿಯೆ ದೊಡ್ಡ ಹೊಡೆತಗಳು ಬ್ಯಾಟ್ಸ್ಮನ್ನಿಂದ ಹೊರಬರುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ಯಾವುದೇ ತರಬೇತುದಾರ ಅಸಾಂಪ್ರದಾಯಿಕ ಹೊಡೆತಗಳನ್ನು ಕಲಿಸಲಾರ. ಅದನ್ನು ಕಲಿಸುವುದು ಸಾಧ್ಯವಿಲ್ಲ. ಯಾವುದೇ ತರಬೇತುದಾರ ಅಂತಾ ಪ್ರಯತ್ನ ಮಾಡುತ್ತಿದ್ದರೆ ಆಟಗಾರನಿಗೆ ಆ ಕೋಚ್ ಹಾನಿ ಮಾಡುತ್ತಿದ್ದಾನೆ ಎಂದು ಅರ್ಥ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.