ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತತ್ವವೆಂದರೆ ಅಪಾಯ ಹೆಚ್ಚಾದಷ್ಟೂ ಫಲಿತಾಂಶ ಉತ್ತಮವಾಗಿರುತ್ತದೆ. ಆದರೆ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ನಂತರ ಈ ತಂತ್ರವು ಭಾರತಕ್ಕೆ ಕೆಲಸ ಮಾಡುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಕಷ್ಟ ಎನ್ನಬಹುದು. ಏಕೆಂದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಅಂತಿಮ 15 ಸದಸ್ಯರನ್ನು ಆಯ್ಕೆ ಮಾಡುವಾಗ ಬಹಳಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದುಬೈಗೆ ತೆರಳುವ ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯಂತಹ ಐದು ಸ್ಪಿನ್ನರ್ಗಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಜಸ್ಪ್ರೀತ್ ಬುಮ್ರಾ ಬದಲಿಗೆ ಹರ್ಷಿತ್ ರಾಣಾ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದ್ದು, ಅನುಭವಿ ಮೊಹಮ್ಮದ್ ಸಿರಾಜ್, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಆಲ್ರೌಂಡರ್ ಶಿವಂ ದುಬೆ ಅವರನ್ನು ಕೈ ಬಿಡಲಾಗಿದೆ.

ಚಾಂಪಿಯನ್ ಟ್ರೋಫಿಯ ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಅಲ್ಲಿ ವೇಗದ ಬೌಲರ್ಗಳು ಸಾಮಾನ್ಯವಾಗಿ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿದ್ದಾರೆ. 2009 ರಿಂದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 58 ಏಕದಿನ ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ವೇಗದ ಬೌಲರ್ಗಳು ಐದಕ್ಕಿಂತ ಕಡಿಮೆ ಎಕಾನಮಿ ದರದಲ್ಲಿ 466 ವಿಕೆಟ್ಗಳನ್ನು ಪಡೆದಿದ್ದಾರೆ. ಸ್ಪಿನ್ನರ್ಗಳು 334 ವಿಕೆಟ್ಗಳನ್ನು ಪಡೆದಿದ್ದು, ಅವರ ಎಕಾನಮಿ ದರ 4.2 ಆಗಿದೆ. ಇಂತಹ ಸಂದರ್ಭದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡದಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.
ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯರೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ದುಬೈನ ಪಿಚ್ ಶಾರ್ಜಾಕ್ಕಿಂತ ಬೌಲರ್ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ವೇಗದ ಬೌಲರ್ಗಳು ಇಲ್ಲಿ ಯಶಸ್ಸನ್ನು ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ಪಾಕಿಸ್ತಾನ ತಂಡದಲ್ಲಿ ಹೆಚ್ಚಿನ ವೇಗದ ಬೌಲರ್ಗಳನ್ನು ಆಯ್ಕೆ ಮಾಡಿದೆ. ಆದರೂ ಅವರು ಇಲ್ಲಿ ಹೆಚ್ಚು ಪಂದ್ಯಗಳನ್ನು ಆಡಬೇಕಾಗಿಲ್ಲ. ಐದು ಸ್ಪಿನ್ನರ್ಗಳನ್ನು ತೆಗೆದುಕೊಳ್ಳುವ ತಂತ್ರವೂ ಅರ್ಥವಾಗುತ್ತಿಲ್ಲ. ಚಕ್ರವರ್ತಿ ಅವರ ಅತ್ಯುತ್ತಮ ಫಾರ್ಮ್ನಿಂದಾಗಿ ಅವರನ್ನು ಆಯ್ಕೆ ಮಾಡಲಾಯಿತು. ಅವರು 2021 ರ ಟಿ20 ವಿಶ್ವಕಪ್ನಲ್ಲಿ ಅದೇ ಮೈದಾನದಲ್ಲಿ ವಿಫಲರಾಗಿದ್ದರು ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿ ಭಾರತ ತಂಡವು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಲದೆ. ವರುಣ್ ಚಕ್ರವರ್ತಿ ಈ ಹಿಂದೆ ಈ ತಂಡಗಳ ವಿರುದ್ಧ ಆಡಿಲ್ಲ. ಜಡೇಜ ಮತ್ತು ಅಕ್ಸರ್ ಆಡುವುದು ಬಹುತೇಕ ಖಚಿತವಾಗಿದ್ದು, ಚಕ್ರವರ್ತಿ ಆಡಿದರೆ ಕುಲದೀಪ್ ಹೊರಗುಳಿಯಬೇಕಾಗಬಹುದು.
ಜಸ್ಪ್ರೀತ್ ಬುಮ್ರಾ ಔಟ್ ಆಗಿದ್ದಾಗ ಮೊಹಮ್ಮದ್ ಸಿರಾಜ್ ಬದಲಿಗೆ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಿದ ಕಾರಣವೂ ಅರ್ಥವಾಗುತ್ತಿಲ್ಲ. ಹೀಗಾಗಿ ಮಹತ್ವದ ಟೂರ್ನಿಗೆ ಹರ್ಷಿತ್ ರಾಣಾ ಆಯ್ಕೆ ಮಾಡಿ ಗಂಭೀರ್ ತಪ್ಪು ಮಾಡಿದ್ರಾ? ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಅಂತಹ ಮೆಗಾ ಟೂರ್ನಿಗೆ ಆಕ್ರಮಣಶೀಲತೆಗಿಂತ ಅನುಭವ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವುದು ಸತ್ಯದ ಸಂಗತಿ.