
ನವದೆಹಲಿ, ಸೆಪ್ಟೆಂಬರ್ 22: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, 2007ರ ವಿಶ್ವ ಟಿ20 ಗೆಲುವಿಗೆ ಪ್ರಮುಖ ಕಾರಣರಾಗಿದ್ದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಯುವಿ ಜೆರ್ಸಿಗೆ ವಿಶೇಷ ಗೌರವ ನೀಡುವಂತೆ ಗಂಭೀರ್ ಬಿಸಿಸಿಐ ಕೋರಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಕಾಲಂನಲ್ಲಿ ಬರೆದುಕೊಂಡಿರುವ ಗಂಭೀರ್ 'ಈ ಸೆಪ್ಟೆಂಬರ್ ತಿಂಗಳೆಂದರೆ ನನಗೆ ವಿಶೇಷ ಭಾವನೆಗಳು ಮೂಡುತ್ತವೆ. 2007ರ ಇದೇ ತಿಂಗಳಿನಲ್ಲಿ ನಾವು ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದೆವು. ಈ ಟೂರ್ನಿ ಗೆಲುವಿನಲ್ಲಿ ಯುವರಾಜ್ ಸಿಂಗ್ ಅದ್ಭುತ ಪಾತ್ರ ವಹಿಸಿದ್ದರು,' ಎಂದಿದ್ದಾರೆ.
'2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಪ್ರದರ್ಶನವನ್ನು ಪರಿಗಣಿಸಿ ಯುವರಾಜ್ ಸಿಂಗ್ ಅವರ ಜೆರ್ಸಿ ನಂಬರ್ 12ನ್ನು ನಿವೃತ್ತಿಯೆಂದು ಘೋಷಿಸಬೇಕೆಂದು ಬಿಸಿಸಿಐಯಲ್ಲಿ ಕೇಳಿಕೊಳ್ಳುತ್ತೇನೆ. ಅದು ಜೀವಮಾನದ ಕ್ರಿಕೆಟಿಗನಿಗೆ ಸಲ್ಲಿಸುವ ಗೌರವವಾಗಲಿದೆ,' ಎಂದು ಗಂಭೀರ್ ಬರೆದುಕೊಂಡಿದ್ದಾರೆ.
2007ರ ಸೆಪ್ಟೆಂಬರ್ 19ರಂದು ವಿಶ್ವ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ, ಓವರ್ ಒಂದರಲ್ಲಿ ಆರೂ ಎಸೆತಗಳಿಗೆ ಸಿಕ್ಸ್ ಬಾರಿಸಿ ವಿಶ್ವದ ಗಮನ ಸೆಳೆದಿದ್ದರು. ಆ ದಿನ ಸಿಂಗ್ 16 ಎಸೆತಗಳಿಗೆ 58 ರನ್ ಚಚ್ಚಿದ್ದರು. ಇದೇ ಪಂದ್ಯದಲ್ಲಿ ಗಂಭೀರ್ 58, ಸೆಹ್ವಾಗ್ 68 ರನ್ ಕೊಡುಗೆಯಿತ್ತಿದ್ದರು. ಈ ಪಂದ್ಯವನ್ನು ಭಾರತ 18 ರನ್ಗಳಿಂದ ಗೆದ್ದಿತ್ತು.