ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೂಪರ್ 4 ಪಂದ್ಯಕ್ಕೆ ಮತ್ತೊಮ್ಮೆ ಮಳೆ ಅಡ್ಡಿಪಡಿಸಿದ್ದು, ಆಟವನ್ನು ಸ್ಥಗಿತಗೊಳಿಸಲಾಗಿದೆ.
ಆದರೆ, ಪಾಕಿಸ್ತಾನ ಮತ್ತು ಭಾರತ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಸೆಪ್ಟೆಂಬರ್ 11ರಂದು ಪಂದ್ಯ ಮುಂದುವರೆಯಲಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ನಿಗದಿತ 50 ಓವರ್ಗಳ ಆಟವನ್ನು ಆಡಿಸಲಾಗುತ್ತದೆ. ಭಾರತ ತಂಡ ಯಾವ ಹಂತದಲ್ಲಿ ಆಟವನ್ನು ನಿಲ್ಲಿಸಿದೆಯೋ ಅಲ್ಲಿಂದ ಆಟ ಮುಂದುವರೆಯಲಿದೆ.
ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್ಗಳಲ್ಲಿ 2 ವಿಕೆಟ್ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಶ್ಲಾಘಿಸಿದ ಗೌತಮ್ ಗಂಭೀರ್
ಇನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಅಚ್ಚರಿ ರೀತಿಯಲ್ಲಿ ಶ್ಲಾಘಿಸಿದ್ದು, 2012ರ ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ 183 ರನ್ ಗಳಿಸಿದ್ದು, ರೋಹಿತ್ ಶರ್ಮಾ ಅವರ ದ್ವಿಶತಕವನ್ನು ಮರೆಮಾಡಿದೆ ಎಂದು ಹೇಳಿದ್ದಾರೆ.

ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯ ಪ್ರದರ್ಶನದ ಪ್ರಮಾಣ, ಪಂದ್ಯದ ಒತ್ತಡ, ಚೇಸಿಂಗ್ನ ಒತ್ತಡ, ಬೌಲಿಂಗ್ ದಾಳಿಯ ಗುಣಮಟ್ಟ ಮತ್ತು ಆ ಪಂದ್ಯದಲ್ಲಿ ಭಾರತ ತಂಡದ ಕಳಪೆ ಆರಂಭವನ್ನು ಗಮನಿಸಿದರೆ, ಕೊಹ್ಲಿಯ ಪ್ರದರ್ಶನ ಆ ನಂತರ ರಚಿಸಲಾದ ಕೆಲವು ದ್ವಿಶತಕಗಳಿಗಿಂತ ಅತ್ಯುತ್ತಮವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯದ ವೇಳೆ ಮಳೆ ಬಂದು ಆಟ ಸ್ಥಗಿತಗೊಂಡಾಗ ಗೌತಮ್ ಗಂಭೀರ್ ಈ ಹೇಳಿಕೆ ನೀಡಿದ್ದಾರೆ.
2012ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಏಷ್ಯಾ ಕಪ್ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. 330 ರನ್ಗಳ ಬೃಹತ್ ಮೊತ್ತದ ಚೇಸಿಂಗ್ನಲ್ಲಿ ಭಾರತದ ಕಳಪೆ ಆರಂಭದ ನಂತರ, ಬಲಗೈ ಬ್ಯಾಟರ್ ತಮ್ಮ ಅಗಾಧ ಚೇಸಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ತಂಡವನ್ನು ಗೆಲ್ಲಿಸಿದರು.
ವಿರಾಟ್ ಕೊಹ್ಲಿ 148 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 183 ರನ್ ಗಳಿಸಿದರು. ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಸಹಾಯದಿಂದ ಭಾರತ ತಂಡ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು.
ಪಾಕಿಸ್ತಾನ ಬೌಲರ್ಗಳ ವಿರುದ್ಧ ಸವಾರಿ ಮಾಡಿದ ರೋಹಿತ್-ಗಿಲ್
ಸದ್ಯ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡುತ್ತಿದ್ದು, ಭಾರತದ ಆರಂಭಿಕರಾದ ರೋಹಿತ್ ಶರ್ಮಾ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 56 ರನ್ ಗಳಿಸಿ ಔಟಾದರೆ, ಅವರ ಹಿಂದೆಯೇ ಶುಭ್ಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಮೂಲಕ 58 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.