2023ರ ಏಕದಿನ ವಿಶ್ವಕಪ್ನತ್ತ ಎಲ್ಲರ ಚಿತ್ತ ನೆಟ್ಟಿದ್ದು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಗೆಲುವು ಸಾಧಿಸಲು ಎಲ್ಲಾ ತಂಡಗಳು ಕೂಡ ರೂಪುರೇಶೆಗಳನ್ನು ಸಿದ್ಧಪಡಿಸುತ್ತವೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಬಗ್ಗೆ ಹೇಳಕೆಯೊಂದನ್ನು ನೀಡಿದ್ದು ಕುತೂಹಲ ಮೂಡಿಸಿದ್ದಾರೆ. ಮುಂದಿನ ವರ್ಷದ ಈ ವಿಶ್ವಕಪ್ ಟೂರ್ನಿಯಲ್ಲಿ ಓರ್ವ ಆಟಗಾರ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲೇಬೇಕು ಎಂದಿದ್ದಾರೆ ಗೌತಮ್ ಗಂಭೀರ್.
ಅಂದಹಾಗೆ ಮಾಜಿ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗಂಭೀರ್ ಹೇಳಿರುವುದು ಹೇರೆ ಯಾರ ಬಗ್ಗೆಯೂ ಅಲ್ಲ. ಯುವ ಪ್ರತಿಭಾನ್ವಿತ ಆಟಗಾರ ಯಶಸ್ವಿ ಜೈಸ್ವಾಲ್ ವಿಚಾರವಾಗಿ. ಮುಂದಿನ ವರ್ಷ ವಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಈ ವಿಶ್ವಕಪ್ನಲ್ಲಿ ಯಶಸ್ವಿ ಜೈಸ್ವಾಲ್ ಭಾರತ ತಂಡದಲ್ಲಿ ಆಡಲೇಬೇಕು ಎಂದಿದ್ದಾರೆ ಗಂಭೀರ್.

ನ್ಯೂಸ್ 18ಗೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಾರಿಯ ಐಪಿಎಲ್ನಲ್ಲಿಅ ಅದ್ಭುತ ಪ್ರದರ್ಶನ ನಿಡಿ ಗಮನಸೆಳೆದಿರುವ ಯಶಸ್ವಿ ಜೈಸ್ವಾಲ್ ಬಗ್ಗೆ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಜೈಸ್ವಾಲ್ ಭಾರತ ಟಿ20 ತಂಡದಲ್ಲಿ ತಕ್ಷಣವೇ ಸ್ಥಾನವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದಿದ್ದು ಈ ಬಾರಿಯ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಅವರು ನೀಡಿರುವ ಅದ್ಭುತ ಪ್ರದರ್ಶನವೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಜೈಸ್ವಾಲ್ ಅವರ ಸಾಧನೆ ಗಮನಾರ್ಹವಾಗಿದೆ. ಆಡಿದ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳು ಸೇರಿದಂತೆ 625 ರನ್ ಗಳಿಸಿ ಅಬ್ಬರಿಸಿರುವ ಜೈಸ್ವಾಲ್ ದೇಶೀಯ ಟೂರ್ನಿಯಲ್ಲಿಯೂ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದರು. ದೇಶೀಯ ಆವೃತ್ತಿಯಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದಾಗ ಜೈಸ್ವಾಲ್ ಅವರಿಗೆ 17 ವರ್ಷ 292 ದಿನ ವಯಸ್ಸಾಗಿತ್ತು.
"ಭಾರತದಲ್ಲಿನ ಸಮಸ್ಯೆಯೇನೆಂದರೆ ಇಲ್ಲಿ ಎರಡು ತಿಂಗಳಿನ ಐಪಿಎಲ್ ಟೂರ್ನಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ಅಲ್ಲಿ ಯಾರು ಉತ್ತಮವಾಗಿ ಆಡುತ್ತಾರೆಯೋ ಅವರನ್ನು ಟೀಮ್ ಇಂಡಿಯಾಗೆ ಸೇರಿಸಲಾಗುತ್ತದೆ. ಜೈಸ್ವಾಲ್ ದೇಶೀಯ ಕ್ರಿಕೆಟ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಪ್ರಥಮ ದರ್ಜೆ ಹಾಗೂ ಏಕದಿನ ಎರಡು ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ದ್ವಿಶತಕವನ್ನು ಕೂಡ ಸಿಡಿಸಿದ್ದಾರೆ" ಎಂದಿದ್ದಾರೆ ಗಂಭೀರ್.