
ಬೆಂಗಳೂರು, ಆಗಸ್ಟ್ 27: ಕ್ರಿಕೆಟ್ ಲೋಕದ ತಾರೆ ಗೌತಮ್ ಗಂಭೀರ್ ಅವರು ಸಾಮಾಜಿಕ ಕಾರ್ಯಗಳ ಮೂಲಕ ಕೂಡಾ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಗೌತಮ್ ಅವರು ರಕ್ಷಾಬಂಧನ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ತೃತೀಯಲಿಂಗಿಗಳಿಂದ ರಾಖಿ ಕಟ್ಟಿಸಿಕೊಂಡು ಅವರನ್ನು ಗೌರವಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ ಗಂಭೀರ್ ನಡೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ.
ಹೌದು, ತಮ್ಮ ಇನ್ಸ್ಟಾಗ್ರಾಂ, ಟ್ವಿಟ್ಟರ್ ಖಾರೆಯಲ್ಲಿ ತೃತೀಯಲಿಂಗಿಗಳಿಂದ ರಾಖಿ ಕಟ್ಟಿಸಿಕೊಳ್ಳುವ ಫೋಟೋವನ್ನು ಗಂಭೀರ್ ಅವರು ಪೋಸ್ಟ್ ಮಾಡಿದ್ದಾರೆ.
ರಾಖಿ ಕಟ್ಟುವುದಕ್ಕೆ ಪುರುಷ ಅಥವಾ ಮಹಿಳೆ ಎನ್ನುವುದಕ್ಕಿಂತ ಮನುಷ್ಯರಾಗಿದ್ದರೆ ಸಾಕು. ಈ ನಿಟ್ಟಿನಲ್ಲಿ ತೃತೀಯಲಿಂಗಿಗಳಾದ ಸಬೀನ ಅಹೆರ್ ಮತ್ತು ಸಿಮ್ರನ್ ಅವರು ಪ್ರೀತಿಯಿಂದ ಕಟ್ಟಿದ ರಾಖಿ ನನ್ನ ಕೈಯಲ್ಲಿದೆ. ಅವರು ಹೇಗಿದ್ದಾರೋ ಹಾಗೇ ಅವರನ್ನು ನಾನು ಒಪ್ಪಿಕೊಂಡಿದ್ದೀನಿ. ನೀವು ಒಪ್ಪಿಕೊಳ್ಳುತ್ತೀರಾ? #respecttransgenders (ತೃತೀಯಲಿಂಗಿಗಳನ್ನು ಗೌರವಿಸಿ) ಎಂದು ಪೋಸ್ಟ್ ಮಾಡಿದ್ದಾರೆ.
ಜನರ ಮನಸ್ಸು ಮನಸ್ಥಿತಿ ಬದಲಾಯಿಸಲು ನಿಮ್ಮ ಈ ಪೋಸ್ಟ್ ಸಹಾಯವಾಗುತ್ತದೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.