ಏಷ್ಯಾಕಪ್ ಟೂರ್ನಿ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಆದರೆ ಈ ಪಂದ್ಯ ಸಂಪೂರ್ಣವಾಗಿ ನಡೆಯಲು ಮಳೆ ಅವಕಾಶ ನೀಡದ ಕಾರಣ ಫಲಿತಾಂಶವಿಲ್ಲದೆ ರದ್ದಾಗಿದೆ. ಆದರ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆರಂಭದಲ್ಲಿ ಬ್ಯಾಟಿಂಗ್ ನಡೆಸಿದ್ದು ಬ್ಯಾಟಿಂಗ್ ವಿಭಾಗಕ್ಕೆ ಉತ್ತಮ ಅಗ್ನಿಪರೀಕ್ಷೆ ಎದುರಾಗಿತ್ತು.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಅತ್ಯಂತ ಕಳಪೆ ಪ್ರದರ್ಶನ ನೀಡಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದ್ದಾರೆ. ಈ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರ ಪೈಕಿ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಕೂಡ ಒಬ್ಬರು. ಪಾಕ್ ಬೌಲರ್ಗಳ ದಾಳಿಯನ್ನು ಎದುರಿಸಲು ಗಿಲ್ ಅಕ್ಷರಶಃ ಪರದಾಡಿದ್ದರು.

ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದಾರೆ. ಅಲ್ಲದೆ ತಾಂತ್ರಿಕವಾಗಿ ಕೆಲ ಲೋಪಗಳ ಬಗ್ಗೆ ಗೌತಮ್ ಗಂಭೀರ್ ಬೊಟ್ಟುಮಾಡಿದ್ದು ಅದನ್ನು ಸರಿಪಡಿಸಿಕೊಳ್ಳಲು ಯುವ ಆಟಗಾರನಿಗೆ ಸಲಹೆ ನೀಡಿದ್ದಾರೆ ಗೌತಮ್ ಗಂಭೀರ್.
"ಗಿಲ್ ಅವರಲ್ಲಿ ತಾಂತ್ರಿಕವಾಗಿ ಲೋಪಗಳು ಕಂಡಿತು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್ಗಳು ಉರುಳಲು ಆರಂಬವಾದ ಕಾರಣ ತಮ್ಮ ಸಹಜ ಆಟವನ್ನು ಅವರು ಆಡಲಿಲ್ಲ. ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು, ಬಳಿಕ ವಿರಾಟ್ ಕೊಹ್ಲಿ ಔಟಾದರು. ನಂತರ ಶ್ರೇಯಸ್ ಐಯ್ಯರ್ ಕೂಡ ವಿಕೆಟ್ ಕಳೆದುಕೊಂಡರು. ಇದರಿಂದಾಗಿ ಅವರು ಒತ್ತಡಕ್ಕೆ ಸಿಲುಕಿದ್ದರು" ಎಂದಿದ್ದಾರೆ ಗೌತಮ್ ಗಂಭೀರ್.
"ಆತ ಜೊತೆಯಾಟವನ್ನು ವಿಸ್ತರಿಸುವ ಪ್ರಯತ್ನ ಮಾಡಿದ್ದರು. ಆದರೆ ಅವರು ಔಟ್ ಆಗಿದ್ದು ಅದ್ಭುತ ಎಸೆತವಾಗಿತ್ತು. ಆದರೆ ಗುಣಮಟ್ಟದ ಬೌಲರ್ಗಳ ವಿರುದ್ಧ ಆಡುವಾಗ ಬ್ಯಾಟ್ ಹಾಗೂ ಪ್ಯಾಡ್ನ ಮದ್ಯೆ ಹೆಚ್ಚಿನ ಅಂತರವಿದ್ದಲ್ಲಿ ಬೌಲರ್ಗಳು ನಿಮ್ಮನ್ನು ವಂಚಿಸುತ್ತಾರೆ" ಎಂದಿದ್ದಾರೆ ಗೌತಮ್ ಗಂಭೀರ್.
ಶುಬ್ಮನ್ ಗಿಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 32 ಎಸೆತಗಳನ್ನು ಎದುರಿಸಿ 10 ರನ್ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಗಿದ್ದರು. ಪಂಜಾಬ್ ಮೂಲದ ಯುವ ಆಟಗಾರ ಶುಬ್ಮನ್ ಗಿಲ್ ಮುಂಬರುವ ವಿಶ್ವಕಪ್ನಲ್ಲಿಯೂ ಭಾರತ ತಂಡದ ಆರಂಭಿಕ ಆಟಗಾರನಾಗಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯುವ ಆಟಗಾರನ ಪ್ರದರ್ಶನ ಭಾರತೀಯ ತಂಡಕ್ಕೆ ಬಹಳ ನಿರ್ಣಾಯಕವಾಗಿರಲಿದೆ.