ಕೋಲ್ಕತ್ತಾ, ಸೆ. 28 : ಐತಿಹಾಸಿಕ 500ನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಆರಂಭಿಕ ಆಟಗಾರ, ಕರ್ನಾಟಕದ ಕೆಎಲ್ ರಾಹುಲ್ ಅವರು ಮುಂದಿನ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ರಾಹುಲ್ ಬದಲಿಗೆ ಗೌತಮ್ ಗಂಭೀರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ನಡೆದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಗಂಭೀರ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಬಿಸಿಸಿಐ ಆಯ್ಕೆದಾರರು ಗಂಭೀರ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇನ್ನು ಗಾಯದ ಸಮಸ್ಯೆಯಿಂದ ವೇಗಿ ಇಶಾಂತ್ ಶರ್ಮಾ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವರ ಬದಲಾಗಿ ಆಫ್ ಸ್ಪಿನ್ನರ್ ಜಯಂತ್ ಯಾದವ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಸೆಪ್ಟೆಂಬರ್ 30(ಶುಕ್ರವಾರ) ಕೋಲ್ಕತ್ತಾದಲ್ಲಿ ಭಾರತ ತನ್ನ 250ನೇ ಟೆಸ್ಟ್ (ತವರು ನೆಲ) ಆಡುತ್ತಿದ್ದು, ಈ ಮಹತ್ವದ ಪಂದ್ಯಕ್ಕೆ ಗೌತಮ್ ಗೆ ಸ್ಥಾನಸಿಕ್ಕಿದೆ.
34 ವರ್ಷ ವಯಸ್ಸಿನ ಗಂಭೀರ್ ಅವರು 56 ಟೆಸ್ಟ್ ಪಂದ್ಯಗಳನ್ನಾಡಿ 4,000 ರನ್ ಗಳಿಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಸತತ ನಾಲ್ಕು ಅರ್ಧ ಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದರು.
ಮಂಗಳವಾರದಂದು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ ಸಿಎ) ಯಲ್ಲಿ ಗೌತಮ್ ಗಂಭೀರ್ ಜತೆಗೆ ಯುವರಾಜ್ ಸಿಂಗ್, ಬರಿಂದರ್ ಸ್ರಾನ್ ಅವರು ಕೂಡಾ ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿದ್ದು ವಿಶೇಷವಾಗಿತ್ತು. (ಒನ್ಇಂಡಿಯಾ ಸುದ್ದಿ)