ಇಂಗ್ಲೆಂಡ್ ವಿರುದ್ಧ ಭಾರತ 3-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಏಕದಿನ ಸರಣಿ ಮೂಲಕ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಫಾರ್ಮ್ಗೆ ಮರಳಿರುವುದು ಮ್ಯಾನೇಜ್ಮೆಂಟ್ಗೆ ಕೊಂಚ ನೆಮ್ಮದಿ ತಂದಿದೆ. ಟೀಮ್ ಇಂಡಿಯಾ ಇದೇ ವಿಶ್ವಾಸದಲ್ಲಿ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಸಜ್ಜಾಗಿದೆ. ಆದರೆ ಟೀಮ್ ಇಂಡಿಯಾ ಪರ ವಿಕೆಟ್ ಕೀಪಿಂಗ್ ಮಾಡುವುದು ಯಾರು ಎಂಬ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.
ಚಾಂಪಿಯನ್ಸ್ ಟ್ರೋಫಿಯ ಭಾರತ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ಗಳಾಗಿ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಟೀಮ್ ಇಂಡಿಯಾ ಪರ ಚಾಂಪಿಯನ್ಸ್ ಟ್ರೋಫಿ ಆಡುವ ಸಾಮರ್ಥ್ಯವನ್ನು ಹೊಂದಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಚರ್ಚೆ ಆಗುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ವಿಕೆಟ್ ಕೀಪರ್ ಯಾರು ಎಂದು ಬಹಿರಂಗಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾದ ಆಟಗಾರರಲ್ಲಿ, ಆಡಲು ಅವಕಾಶ ಸಿಗದ ಏಕೈಕ ಆಟಗಾರ ರಿಷಭ್ ಪಂತ್. ಅವರ ಬದಲಿಗೆ ಕೆಎಲ್ ರಾಹುಲ್ ಅವರನ್ನು ಕಣಕ್ಕಿಳಿಸಲಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಆದರೆ ಅವರು ಆರಾಮದಾಯಕವಾಗಿ ಕಾಣಲಿಲ್ಲ. ಮೂರನೇ ಪಂದ್ಯದಲ್ಲಿ ಅವರು ತಮ್ಮ ನೆಚ್ಚಿನ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಈ ವೇಳೆ ತಂಡಕ್ಕೆ ಅವರು 29 ಎಸೆತಗಳಲ್ಲಿ 40 ರನ್ಗಳ ಉಪಯುಕ್ತ ಕೊಡುಗೆ ನೀಡಿದರು. ಈ ಪಂದ್ಯವನ್ನು ಭಾರತ 142 ರನ್ಗಳಿಂದ ಗೆದ್ದುಕೊಂಡಿತು.
ಪಂದ್ಯದ ನಂತರ ಮಾತನಾಡಿ ಗೌತಮ್ ಗಂಭೀರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ವಿಕೆಟ್ ಕೀಪರ್ ಯಾರು ಎಂದು ಹೇಳಿದ್ದಾರೆ. 'ರಾಹುಲ್ ಈಗ ನಮ್ಮ ನಂಬರ್ ಒನ್ ವಿಕೆಟ್ ಕೀಪರ್. ನಾನು ಈಗ ಹೇಳಬಲ್ಲೆ ಅಷ್ಟೆ. ರಿಷಭ್ ಪಂತ್ಗೆ ಅವಕಾಶ ಸಿಗಬಹುದು. ಆದರೆ ಪ್ರಸ್ತುತ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾವು ಇಬ್ಬರು ವಿಕೆಟ್ಕೀಪರ್-ಬ್ಯಾಟರ್ಗಳೊಂದಿಗೆ ಆಡಲು ಸಾಧ್ಯವಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುತ್ತಾರೆ. ಆಕ್ರಮಣಕಾರಿ ಬ್ಯಾಟರ್ ರಿಷಭ್ ಪಂತ್ ಅವರನ್ನು ಆಯ್ಕೆಯಾಗಿ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲು ತಕ್ಷಣ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಿಂದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು, ಅವರ ಬದಲಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾತಾನಾಡಿದ ಗಂಭೀರ್ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು, ವರುಣ್ ಚಕ್ರವರ್ತಿ ಆಯ್ಕೆ ಮಾಡುವುದಕ್ಕೆ ಒಂದೇ ಕಾರಣ. ನಾವು ವಿಕೆಟ್ ತೆಗೆದುಕೊಳ್ಳುವ ಬೌಲರ್ ಆಗಿ ಒಂದು ಆಯ್ಕೆಯನ್ನು ಬಯಸಿದ್ದೆವು. ಹೀಗಾಗಿ ವರುಣ್ ಚಕ್ರವರ್ತಿ ಅವರಿಗೆ ಮಣೆ ಹಾಕಲಾಗಿದೆ. ಜೈಸ್ವಾಲ್ ಅವರಿಗೆ ಇನ್ನೂ ದೀರ್ಘ ಭವಿಷ್ಯವಿದೆ. ನಾವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.