ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಂದಿನ ಭಾನುವಾರ ಈ ಫೈನಲ್ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ. ಭಾರತ ಮೂರನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯುವ ಅವಕಾಶ ಹೊಂದಿದ್ದರೆ ಆಸ್ಟ್ರೇಲಿಯಾ ಮುಂದೆ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶವಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಕಾದಾಟವನ್ನು ವೀಕ್ಷಿಸಲು ಈಗ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡ 3 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ವಿಶ್ವಕಪ್ ಇತಿಹಾಸದಲ್ಲಿ 8ನೇ ಬಾರಿಗೆ ವಿಶ್ವಕಪ್ ಟೂರ್ನಿಯ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹೀಗಾಗಿ ಸಾಧಾರಣ ಗುರಿ ಪಡೆದುಕೊಂಡಿದ್ದು ಉತ್ತಮ ಆರಂಭದ ಹೊರತಾಗಿಯೂ ಆಸ್ಟ್ರೇಲಿಯಾ ಅಂತಿಮವಾಗಿ ಪ್ರಯಾಸ ಪಟ್ಟು ಗೆಲುವು ಸಾಧಿಸಿತ್ತು.

ಈ ಪ್ರದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದು ಆಸ್ಟ್ರೇಲಿಯಾ ತಂಡದ ಪ್ರದರ್ಶನದ ಬಗ್ಗೆ ಕಟುವಾದ ವಿಮರ್ಶೆ ಮಾಡಿದ್ದಾರೆ. "ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ ಎನಿಸುತ್ತಿಲ್ಲ. ಆಸ್ಟ್ರೇಲಿಯಾ ತಂಡ ಇನ್ನು ಕೂಡ ಬಹಳ ದುರ್ಬಲ ತಂಡವಾಗಿ ಕಾಣಿಸುತ್ತಿದೆ. ಆದರೆ ಖಂಡಿತವಾಗಿಯೂ ಅವರಿಗೆ ನಾಕೌಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆ ಎನ್ನುವುದು ಗೊತ್ತಿದೆ" ಎಂದಿದ್ದಾರೆ ಗೌತಮ್ ಗಂಭೀರ್.
ಮುಂದುವರಿದು ಅವರು ಭಾರತ ತಂಡ ಫೈನಲ್ ಪಂದ್ಯದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಕಳೆದ 10 ಪಂದ್ಯಗಳಲ್ಲಿ ಆಡಿದಂರೆಯೇ ಭಾರತ ತನ್ನ ಅತ್ಯುತ್ತಮ ಆಟವನ್ನು ಫೈನಲ್ ಪಂದ್ಯದಲ್ಲಿ ಪ್ರದರ್ಶಿಸಬೇಕಿದೆ. ಅಹ್ಮದಾಬಾದ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವಾಗ ಭಾರತ ತಂಡ ಬಹಳ ಆತ್ಮವಿಶ್ವಾಸದಿಂದ ಆಡಲಿದೆ" ಎಂದಿದ್ದಾರೆ ಗೌತಮ್ ಗಂಭೀರ್.
ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಪ್ರಸಿದ್ಧ್ ಕೃಷ್ಣ
ಪ್ಯಾಟ್ ಕಮ್ಮಿನ್ಸ್ (c), ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್ (WK), ಸೀನ್ ಅಬಾಟ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್ಕ್, ಮಾರ್ನಸ್ ಲ್ಯಾಬುಶೇನ್