ಜುಲೈ 9 ಮಂಗಳವಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ಹೊಸ ಹೆಡ್ ಕೋಚ್ ಅನ್ನು ಪ್ರಕಟಿಸಿದೆ. ಟಿ20 ವಿಶ್ವಕಪ್ ಬಳಿಕವೇ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿತ್ತು.
ಇದಾದ ಬಳಿಕ ಭಾರತ ತಂಡ ಶ್ರೇಷ್ಠ ಕೋಚ್ಗಾಗಿ ಹುಡುಕಾಟ ನಡೆಸಿತ್ತು. 2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮುಖ್ಯ ಕೋಚ್ಗೆ ಗಂಭೀರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಗೌತಮ್ ಗಂಭೀರ್ ಅವರು ಹೆಡ್ ಕೋಚ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಯ್ ಶಾ ಅವರು ಗಂಭೀರ್ ಜೊತೆಗಿನ ಫೋಟೋವನ್ನು ಎಕ್ಸ್ (ಟ್ವೀಟರ್)ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಆಧುನಿಕ ಕಾಲದಲ್ಲಿ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ. ಅದನ್ನು ಗೌತಮ್ ಅವರು ತೀರಾ ಹತ್ತಿರದಿಂದ ಕಂಡಿದ್ದಾರೆ. ಅಲ್ಲದೆ
ಗೌತಮ್ ತನ್ನ ವೃತ್ತಿಜೀವನದುದ್ದಕ್ಕೂ ಎಲ್ಲಾ ಮಾದರಿ ಕ್ರಿಕೆಟ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಹೀಗಾಗಿ ಗೌತಮ್ ಅವರು ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಲು ಆದರ್ಶ ವ್ಯಕ್ತಿ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಟೀಮ್ ಇಂಡಿಯಾದ ಬಗ್ಗೆ ಅವರ ಸ್ಪಷ್ಟ ದೃಷ್ಟಿಕೋನ, ಅಪಾರ ಅನುಭವಗಳು ಪ್ರತಿಷ್ಠಿತ ಹೆಡ್ ಕೋಚ್ ಹುದ್ದೆಯನ್ನು ನಿರ್ವಹಿಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ಬಿಸಿಸಿಐಗೆ ಇದೆ. ಗಂಭೀರ್ ಅವರ ಹೊಸ ಪ್ರಯಾಣಕ್ಕೆ ಸ್ವಾಗತ ಎಂದು ಜಯ್ ಶಾ ಶುಭಕೋರಿದ್ದಾರೆ.
ಬಿಸಿಸಿಐ ಅಧಿಕೃತ ಘೋಷಣೆ ಬಳಿಕ ಗೌತಮ್ ಗಂಭೀರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಭಾರತವು ನನ್ನ ಗುರುತಾಗಿದೆ. ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಸವಲತ್ತು ಎಂದು ಹೇಳಿದ್ದಾರೆ. ಬೇರೆ ಟೋಪಿ ಹಾಕಿಕೊಂಡಿದ್ದರೂ ಮರಳಿ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ.
ಆದರೆ ನನ್ನ ಗುರಿ ಮೊದಲಿನಂತೆಯೇ ಇದೆ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವನೆ ಮೂಡಿಸುವುದು. ನೀಲಿ ಬಣ್ಣದ ಸೈನಿಕರು (ಆಟಗಾರರು) 1.4 ಶತಕೋಟಿ ಭಾರತೀಯರ ಕನಸುಗಳನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಈ ಕನಸುಗಳನ್ನು ನನಸಾಗಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ನೂತನ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.