ಭಾರತದ ಪ್ರಧಾನಿ ವಿರುದ್ಧ ಅಫ್ರಿದಿ ಆಡಿದ ಮಾತಿಗೆ ಗಂಭೀರ್ ಮಾತಿನ ಏಟು

ಪಾಕಿಸ್ತಾನ ಕ್ರಿಕೆಟ್ನ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಭಾರತ ಪ್ರಧಾನಿಯ ಬಗ್ಗೆ ಕಟು ಮಾತುಗಳನ್ನಾಡಿದ್ದಾರೆ. ಇದು ಭಾರತದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಅಫ್ರಿದಿ ಆಡಿದ ಮಾತುಗಳಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ ಶಾಹೀದ್ ಅಫ್ರಿದಿ, ನಾನು ನಿಮ್ಮ ಹಳ್ಳಿಯಲ್ಲಿದ್ದೇನೆ. ಕೊರೊನಾ ವೈರಸ್ನ ಕಾರಣಕ್ಕೆ ಇಲ್ಲಿಗೆ ಬರುವುದು ಸ್ವಲ್ಪ ತಡವಾಗಿದೆ. ಆದರೆ ಕೊರೊನಾಗಿಂತಲೂ ದೊಡ್ಡದಾದ ಕಾಯಿಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಭಾರತದ ಪ್ರಧಾನಿ ವಿರುದ್ಧ ಟೀಕೆಯನ್ನು ಮಾಡಿದ್ದರು.
ಅಫ್ರಿದಿಯ ಈ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್, ಪಾಕಿಸ್ತಾನಕ್ಕೆ 7 ಲಕ್ಷ ಸೈನಿಕರಿದ್ದು, 20 ಕೋಟಿ ಜನರ ಬೆಂಬಲವಿದೆ ಎಂದು 16 ವರ್ಷದ ಶಾಹೀದ್ ಆಫ್ರಿದಿ ಹೇಳುತ್ತಾರೆ. 70 ವರ್ಷದಿಂದ ಕಾಶ್ಮೀರಕ್ಕಾಗಿ ಭಿಕ್ಷೆ ಬೇಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸೇನಾ ಮುಖ್ಯಸ್ಥ ಬಜ್ವಾರಂತಹ ಜೋಕರ್ಗಳು ಭಾರತ ಹಾಗೂ ನರೇಂದ್ರ ಮೋದಿಯ ವಿರುದ್ಧ ವಿಷವನ್ನು ಕಕ್ಕುತ್ತಾರೆ. ಈ ಮೂಲಕ ಪಾಕಿಸ್ತಾನದ ಜನರನ್ನು ಮುಟ್ಠಾಳರನ್ನಾಗಿ ಮಾಡುತ್ತಿದ್ದಾರೆ. ಆದರೆ ಇದರ ಮೂಲಕ ಕಾಶ್ಮೀರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದ ಸಂದರ್ಭದಿಂದಲೂ ಅಫ್ರಿದಿ ಮತ್ತು ಗಂಭೀರ್ ಮಧ್ಯೆ ಹಲವಾರು ಬಾರಿ ಮಾತಿನ ಚಕಮಕಿಗಳು ನಡೆದಿದೆ. ಇತ್ತೀಚೆಗೆ ಗಂಭೀರ್ ಯಾವುದೇ ದೊಡ್ಡ ದಾಖಲೆಗಳನ್ನು ಮಾಡಿಲ್ಲ, ಆದರೂ ಡಾನ್ ಬ್ರಾಡ್ಮನ್ ರೀತಿ ವರ್ತಿಸುತ್ತಾರೆ ಎಂದು ಪುಸ್ತಕವೊಂದರಲ್ಲಿ ಆಫ್ರಿದಿ ಟೀಕಿಸಿದ್ದರು. ತಮ್ಮ ವಯಸ್ಸಿನ ಬಗ್ಗೆ ನೆನಪಿಟ್ಟುಕೊಳ್ಳದವರು ನನ್ನ ದಾಖಲೆಯನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಎಂದು ಗಂಭೀರ್ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications