
ಬೆಂಗಳೂರು, ಮಾರ್ಚ್ 19: ವಿಶ್ವ ಕ್ರಿಕೆಟ್ನಲ್ಲಿ ಅವರಿವರ ಬಗ್ಗೆ ತಕರಾರು ತೆಗೆಯುವುದರಲ್ಲಿ ಮುಂಚೂಣಿಯಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈಗ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ. ಐಪಿಎಲ್ ನಲ್ಲಿ ಕೊಹ್ಲಿಯ ಆರ್ಸಿಬಿ ನಾಯಕತ್ವವನ್ನು ಅಣಕಿಸಿ ಗಂಭೀರ್, ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟೀಮ್ ಇಂಡಿಯಾ ಕ್ಯಾಪ್ಟನ್ ಕಾಲೆಳೆದಿರುವ ಗಂಭೀರ್, ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಕಳಪೆ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಕೊಹ್ಲಿ ತಂಡದ ನಾಯಕನಾಗಿ ಮುಂದುವರೆಯುತ್ತಿರುವುದಕ್ಕೆ ವಿರಾಟ್ ಅವರು ಆರ್ಸಿಬಿ ಫ್ರಾಂಚೈಸಿಗೆ ಧನ್ಯವಾದ ಸಲ್ಲಿಸಬೇಕು, ಫ್ರಾಂಚೈಸಿಗೆ ಅಭಾರಿಯಾಗಬೇಕು ಎಂದಿದ್ದಾರೆ.
ಆರ್ಸಿಬಿ ಫ್ರಾಂಚೈಸಿ ಕೊಹ್ಲಿಯನ್ನು ನಾಯಕತ್ವದಿಂದ ಯಾಕೆ ಇನ್ನೂ ತೆಗೆದುಹಾಕಿಲ್ಲ ಎಂಬರ್ಥದಲ್ಲಿ ಸುಖಾಸುಮ್ಮನೆ ಗಂಭೀರ್ ಪ್ರಶ್ನಿಸಿರುವುದಷ್ಟೇ ಅಲ್ಲ, ವಿರಾಟ್ ಕೊಹ್ಲಿ ನಾಯಕತ್ವವನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ ಅಥವಾ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಹೋಲಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ನಲ್ಲಿ ತಲಾ ಮೂರುಸಾರಿ ಟ್ರೋಫಿ ಗೆದ್ದ ಹೆಗ್ಗಳಿಕೆ ಪಾತ್ರವಾಗಿವೆ. ಹೀಗಾಗಿ ಆ ಎರಡೂ ತಂಡಗಳ ನಾಯಕರ ಮುಂದೆ ಕೊಹ್ಲಿ ಏನೇನೂ ಅಲ್ಲ ಎಂಬರ್ಥದಲ್ಲಿ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ಗೆ ಹೇಳಿಕೆ ನೀಡಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಟ್ರೋಫಿ ಗೆಲ್ಲುವವರೆಗೂ ಕೊಹ್ಲಿಯ ನಾಯಕತ್ವವನ್ನು ಒಪ್ಪಲಾರೆ ಎಂಬರ್ಥದಲ್ಲಿ ಗಂಭೀರ್ ನೀಡಿರುವ ಹೇಳಿಕೆಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಭೀರ್ ಮೇಲಿನ ಅಸಮಾಧವನ್ನು ಕೊಹ್ಲಿ ಅಭಿಮಾನಿಗಳು ಟ್ವಿಟರ್ ಮೂಲಕ ಹೊರಹಾಕಿದ್ದಾರೆ. ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪಾಲ್ಗೊಳ್ಳಬೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಗಂಭೀರ್, 'ಪಾಲ್ಗೊಳ್ಳ ಕೂಡದು' ಎಂದು ಹೇಳಿದ್ದಾರೆ.