
ನವದೆಹಲಿ, ಜುಲೈ 27: ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ತನ್ನ ಕೌಶಲಗಳನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ಮಾನಸಿಕ ವಿಚಾರಗಳಲ್ಲಿ ಹೆಚ್ಚು ಉತ್ತಮಗೊಳ್ಳಬೇಕು. ಆಗ ಮಾತ್ರ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿ ಕ್ರಿಕೆಟರ್ ಅನ್ನಿಸಿಕೊಳ್ಳಬಹುದು ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟ್ ಶೋನಲ್ಲಿ ಮಾತನಾಡಿದ ಗಂಭೀರ್, 'ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕಾದರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿ ಆಟಗಾರ ಅನ್ನಿಸಿಕೊಳ್ಳಬೇಕಾದರೆ ನೀವು ಕೌಶಲಗಳನ್ನು ಸುಧಾರಿಸಿಕೊಳ್ಳಬೇಕು. ಅದಕ್ಕಿಂತಲೂ ಹೆಚ್ಚಾಗಿ ನೀವು ಮಾನಸಿಕವಾಗಿ ಬಲಗೊಳ್ಳಬೇಕು,' ಎಂದಿದ್ದಾರೆ.
21ರ ಹರೆಯದ ಪಂತ್ ಟೀಮ್ ಇಂಡಿಯಾದಲ್ಲಿ ನೆಲೆಯೂರಲು ಪರದಾಡುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಿನ ಟಿ20ಐ ಮತ್ತು ಏಕದಿನ ಪಂದ್ಯಗಳ ವೇಳೆ ಪಂತ್ ಬೆಂಚ್ ಪ್ಲೇಯರ್ ಆಗಿ, ವಾಟರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಎಲ್ ರಾಹುಲ್ ಅವರು ವಿಕೆಟ್ ಕೀಪರ್ ಆಗಿ ಯಶಸ್ವಿಯಾಗುತ್ತಿದ್ದಂತೆ ಪಂತ್ ಸ್ಥಾನ ಅಸ್ಥಿರಗೊಳ್ಳುತ್ತಿದೆ.
ಪಂತ್ ಉದ್ದೇಶಿಸಿ ಮಾತನಾಡಿದ ಗಂಭೀರ್, 'ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕಾಲ, ಎಷ್ಟು ಎಸೆತಗಳನ್ನು ಎದುರಿಸಲು ಸಾಧ್ಯವೋ ಅಷ್ಟು ಎಸೆಗಳಿಗೆ ಹೊಡೆತಗಳನ್ನು ನೀಡಲು ನಿಮ್ಮಿಂದ ಸಾಧ್ಯವಾಗಬಹುದು. ಆದರೆ ಟೀಕೆಗಳನ್ನು ಎದುರಿಸಬೇಕಾದರೆ ನೀವು ಮಾನಸಿಕವಾಗಿ ಬಲಿಷ್ಠರಾಗಬೇಕು,' ಎಂದು ಸಲಹೆ ನೀಡಿದ್ದಾರೆ.