ತವರಿನಲ್ಲೇ ನಡೆಯುವ 2023ರ ಏಕದಿನ ವಿಶ್ವಕಪ್ಗೆ ಮುಂಚಿತವಾಗಿ ಭಾರತ ಕ್ರಿಕೆಟ್ ತಂಡವು ದೊಡ್ಡ ಆತ್ಮವಿಶ್ವಾಸವನ್ನು ಪಡೆದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೆಪ್ಟೆಂಬರ್ 17ರ ಭಾನುವಾರದಂದು ನಡೆದ 2023ರ ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿಯಿತು.
ಈ ಗೆಲುವು ರೋಹಿತ್ ಶರ್ಮಾ ಅವರನ್ನು ಏಷ್ಯಾ ಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರನ್ನಾಗಿ ಮಾಡಿದೆ. ತಮ್ಮ ನಾಯಕತ್ವದಲ್ಲಿ ಎರಡನೇ ಪ್ರಶಸ್ತಿ ಮತ್ತು ಒಟ್ಟಾರೆ 10ನೇ ಪಂದ್ಯದ ಗೆಲುವಾಗಿದೆ.
ಇದೀಗ ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಕೆಟ್ಟ ವಿಶ್ವಕಪ್ ಪಂದ್ಯಾವಳಿ ಅದನ್ನು ಬದಲಾಯಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

"ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಯಾವತ್ತೂ ಅನುಮಾನವಿರಲಿಲ್ಲ. ಅವರು 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೆಲವರು ಒಮ್ಮೆಯೂ ಗೆದ್ದಿಲ್ಲ. ಆದರೆ ಅವರ ನಿಜವಾದ ಪರೀಕ್ಷೆ ಇನ್ನು 15 ದಿನಗಳಲ್ಲಿ ಬರಲಿದೆ. ನೀವು ಈಗ ಡ್ರೆಸ್ಸಿಂಗ್ ರೂಮ್ನಲ್ಲಿ ನಿಮ್ಮ ಅತ್ಯುತ್ತಮ 15ರಿಂದ 18 ಆಟಗಾರರನ್ನು ಹೊಂದಿದ್ದೀರಿ".
"ತಂಡವು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೆ ನಾಯಕತ್ವದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಬರುತ್ತವೆ. ಪ್ರತಿ ವಿಶ್ವಕಪ್ ನಂತರ, ನಾಯಕನು ನೀಡಲು ಸಾಧ್ಯವಾಗದಿದ್ದರೆ ನಂತರ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಇದನ್ನು ವಿರಾಟ್ ಕೊಹ್ಲಿಯೂ ಎದುರಿಸಿದರು ಮತ್ತು 2007ರಲ್ಲಿ ರಾಹುಲ್ ದ್ರಾವಿಡ್ ಅನುಭವಿಸಿದರು," ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದ್ದಾರೆ.
"2023ರ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಫೈನಲ್ ತಲುಪಿಸಲು ವಿಫಲವಾದರೆ, ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಸದ್ಯದ ತಂಡವು ವಿಶ್ವಕಪ್ ಫೈನಲ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಗೌತಮ್ ಗಂಭಿರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿನ ಪಂದ್ಯದ ನಂತರದ ವಿಶ್ಲೇಷಣೆಯಲ್ಲಿ ಹೇಳಿದರು.

ಮೊಹಮ್ಮದ್ ಸಿರಾಜ್ ಅವರ ಬಿರುಗಾಳಿ ಬೌಲಿಂಗ್ ಪ್ರದರ್ಶನದಿಂದ ಎಂಟನೇ ಏಷ್ಯನ್ ಕಿರೀಟಕ್ಕಾಗಿ ಭಾನುವಾರ ಶ್ರೀಲಂಕಾ ವಿರುದ್ಧ ಭಾರತ ಸುಲಭವಾಗಿ ಗೆಲುವು ಸಾಧಿಸಿತು. ಇದು ವಿಶ್ವಕಪ್ಗೆ ಮುನ್ನ ನಾಯಕ ರೋಹಿತ್ ಶರ್ಮಾಗೆ ದೊಡ್ಡ ಆತ್ಮವಿಶ್ವಾಸವನ್ನು ನೀಡುತ್ತದೆ.
ಕೊಲಂಬೊದಲ್ಲಿ ಮೊಹಮ್ಮದ್ ಸಿರಾಜ್ 21 ರನ್ ನೀಡಿ 6 ವಿಕೆಟ್ಗಳನ್ನು ಪಡೆಯುವ ಮೂಲಕ ಭಾರತವು ಶ್ರೀಲಂಕಾ ತಂಡವನ್ನು 15.2 ಓವರ್ಗಳಲ್ಲಿ 50 ರನ್ಗಳಿಗೆ ಕಟ್ಟಿಹಾಕಿತು. ನಂತರ 6.1 ಓವರ್ಗಳಲ್ಲಿ ಸುಲಭವಾಗಿ ಬೆನ್ನತ್ತಿ 10 ವಿಕೆಟ್ಗಳಿಂದ ಗೆದ್ದಿತು.
50 ಓವರ್ಗಳ ಪಂದ್ಯಾವಳಿಯಲ್ಲಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ನೇತೃತ್ವದ ಭಾರತೀಯ ಬೌಲರ್ಗಳು ಮಿಂಚಿದ್ದಾರೆ. ಇದು ಅಕ್ಟೋಬರ್ 5ರಂದು ಭಾರತದಲ್ಲಿ ಪ್ರಾರಂಭವಾಗುವ ಏಕದಿನ ವಿಶ್ವಕಪ್ಗೆ ಬೂಸ್ಟರ್ ಆಗಿ ಕಾರ್ಯನಿರ್ವಹಿಸಿದೆ.

ಕೇವಲ 116 ನಿಮಿಷಗಳ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ನಂತರ, ರೋಹಿತ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, "ಇಲ್ಲಿಗೆ ಬಂದು ಈ ರೀತಿಯ ಪಂದ್ಯಾವಳಿಯನ್ನು ಗೆಲ್ಲಲು ಇದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ," ಎಂದರು.
"ಪಂದ್ಯಾವಳಿಯ ವಿವಿಧ ಹಂತಗಳಲ್ಲಿ ನಮ್ಮ ಆಟದ ವಿವಿಧ ಭಾಗಗಳಲ್ಲಿ ನಾವು ಸವಾಲು ಎದುರಿಸಿದ್ದೇವೆ ಮತ್ತು ವಿವಿಧ ಪರಿಸ್ಥಿತಿಗಳು, ವಿವಿಧ ಬೌಲಿಂಗ್ ಪ್ರಕಾರಗಳ ವಿರುದ್ಧ ನಾವು ಆ ಸವಾಲುಗಳನ್ನು ಎದುರಿಸಿದ್ದೇವೆ," ಎಂದು ರೋಹಿತ್ ಶರ್ಮಾ ತಿಲಿಸಿದರು.
"ನಾವು ಈ ಪಂದ್ಯಾವಳಿಯಿಂದ ಬಹಳಷ್ಟು ಧನಾತ್ಮಕ ಅಂಶಗಳನ್ನು ತೆಗೆದುಕೊಂಡಿದ್ದೇವೆ. ಕೇವಲ ಒಂದು ಅಥವಾ ಎರಡು ಆಟಗಾರರಿಗೆ ಮಾತ್ರವಲ್ಲದೆ ಇಡೀ ತಂಡಕ್ಕೆ. ಎಲ್ಲರೂ ತಮ್ಮ ಕೆಲಸವನ್ನು ಮಾಡಿದ್ದಾರೆ," ಎಂದು ಭಾರತೀಯ ನಾಯಕ ಹೇಳಿದರು.