

ಹೊಸದಿಲ್ಲಿ, ಜು. 2: ನ್ಯಾಯಾಲಯ ನೇಮಿತ ಆಡಳಿತಾಧಿಕಾರಿ ನ್ಯಾಯಮೂರ್ತಿ ವಿಕ್ರಮ್ ಸೇನ್ ಡಿಡಿಸಿಎ ವಿಚಾರಗಳಿಂದ ಬದಿಗೆ ಸರಿದಿರುವುದರಿಂದ ಭಾರತದ ಹಿರಿಯ ಆರಂಭಿಕಾರ ಗೌತಮ್ ಗಂಭೀರ್ ಅವರು ದೆಹಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ)ನಲ್ಲಿ 'ಸರ್ಕಾರದ ನಾಮನಿರ್ದೇಶಿತ'ರಾಗಿ ಮರಳಲಿದ್ದಾರೆ ಎಂದು ಹೊಸದಾಗಿ ಆಯ್ಕೆಯಾಗಿರುವ ಕಾರ್ಯದರ್ಶಿ ವಿನೋದ್ ತಿಹಾರಾ ಹೇಳಿದ್ದಾರೆ.
ಎರಡು ಬಾರಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಗೌತಮ್ ಗಂಭೀರ್ ಅವರು ಕಳೆದ ವರ್ಷವೇ ಸರ್ಕಾರದ ನಾಮನಿರ್ದೇಶಿತರಾಗಿ ಆಯ್ಕೆಗೊಂಡಿದ್ದರು. ಆದರೆ ನ್ಯಾಯಮೂರ್ತಿ ಸೇನ್ ಅವರು ಮುಂದುವರೆಯಲು ಅವಕಾಶ ನೀಡಿರಲಿಲ್ಲ. ಯಾಕೆಂದರೆ ಗಂಭೀರ್ ಆಗ ಸಕ್ರಿಯ ಕ್ರಿಕೆಟ್ ಆಟಗಾರರಾಗಿದ್ದುದು ಇದಕ್ಕೆ ಕಾರಣವಾಗಿತ್ತು.
ಡಿಡಿಸಿಎ ಚುನಾವಣೆಯಲ್ಲಿ ರಜತ್ ಶರ್ಮಾ ಸಮಿತಿಯು ಗೆಲುವು ಸಾಧಿಸಿದ ನಂತರ ಕಾರ್ಯದರ್ಶಿ ತಿಹಾರಾ ಅವರು ಗಂಭೀರ್ ಅವರಿಗೆ ಅವಕಾಶ ನೀಡುವತ್ತ ಯೋಚಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಿಹಾರಾ, 'ಚುನಾಯಿತ ಸದಸ್ಯರು ಆಡಳಿತಾತ್ಮಕ ಭಾಗವನ್ನು ನೋಡುತ್ತಾರೆ. ಆದರೆ ಕ್ರಿಕೆಟ್ ಗೆ ಸಂಬಂಧಿಸಿದ ನಿರ್ಧಾರಗಳನ್ನು ಕ್ರಿಕೆಟಿಗ ಗಂಭೀರ್ ತೆಗೆದುಕೊಳ್ಳಲಿದ್ದಾರೆ. ದೆಹಲಿ ಕ್ರಿಕೆಟ್ ನಲ್ಲಿ ಗೌತಮ್ ಗಂಭೀರ್ ಒಂದು ದೊಡ್ಡ ಹೆಸರಾಗಿದೆ. ಅದು ಸಹಜವೇ. ಯಾಕೆಂದರೆ ಗಂಭೀರ್ ಕ್ರಿಕೆಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೇ' ಎಂದರು.
'ನೀವಿದನ್ನು ಬೇಕಾದರೆ ಸುದ್ದಿ ಮಾಡಬಹುದು. ಗೌತಮ್ ಗಂಭೀರ್ ಅವರು ಕ್ರಿಕೆಟ್ ಗೆ ಸಂಬಂಧಿಸಿದ ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ' ಎಂದು ತಿಹಾರಾ ಅವರು ಕೋಟ್ಲಾದಲ್ಲಿ ಸಂವಾದವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.