Gautam Gambhir: ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್ಗೆ ಮುತ್ತಿಟ್ಟಿತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, ತಮ್ಮ ಮಾಜಿ ಸಹ ಆಟಗಾರ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ಅವರಿಗೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತ ತಂಡ 2026ರ ಟಿ20 ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ ಎಂ.ಎಸ್.ಧೋನಿ ಅವರು ಗಂಭೀರ್ಗೆ ಅಭಿನಂದನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇಬ್ಬರೂ ದಿಗ್ಗಜರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ್ ತಮ್ಮ ಮನದಾಳದ ಆಸೆಯೊಂದನ್ನು ಬಿಚ್ಚಿಟ್ಟಿದ್ದಾರೆ.

"ಯಾವುದಾದರೂ ಒಂದು ದಿನ ಧೋನಿ ಕೂಡ ನನ್ನ ಸ್ಥಾನದಲ್ಲಿ ಅಂದರೆ, ಮುಖ್ಯ ಕೋಚ್ ಆಗಿ ಇರಲಿ ಎಂದು ನಾನು ಬಯಸುತ್ತೇನೆ. ಆಗ ಭವಿಷ್ಯದಲ್ಲಿ ನಾವಿಬ್ಬರೂ ಇದೇ ರೀತಿಯ ಸಂಭಾಷಣೆಯನ್ನು ನಡೆಸಬಹುದು," ಎಂದು ಪ್ರಸ್ತುತ ಟೀಂ ಇಂಡಿಯಾ ಕೋಚ್ ಆಗಿರುವ ಗೌತಮ್ ಗಂಭೀರ್ ಅವರು ತಿಳಿಸಿದ್ದಾರೆ.
ಮಾರ್ಚ್ 8ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ವಿಶ್ವಕಪ್ ಫೈನಲ್ ಪಂದ್ಯವನ್ನು ಎಂ.ಎಸ್.ಧೋನಿ ಅವರು ಖುದ್ದಾಗಿ ತಮ್ಮ ಪತ್ನಿ ಸಾಕ್ಷಿ ಸಿಂಗ್ ಜೊತೆ ಆಗಮಿಸಿ ವೀಕ್ಷಣೆ ಮಾಡಿದ್ದರು. ಭಾರತ ತಂಡ ಜಯಭೇರಿ ಬಾರಿಸಿದ ನಂತರ, ಅವರು ಟೀಮ್ ಇಂಡಿಯಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.
"ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಎಂ.ಎಸ್.ಧೋನಿ ಅವರು ಬಂದಿದ್ದು ತುಂಬಾ ಸಂತೋಷ ತಂದಿದೆ. ಅಷ್ಟೇ ಅಲ್ಲದೆ, ಅವರು ನನಗೆ 'ಸ್ವಲ್ಪ ನಗು' ಎಂದು ಹೇಳಿದ್ದು ಕೂಡ ಬಹಳ ಖುಷಿ ನೀಡಿತು," ಎಂದು ರೆವ್ ಸ್ಪೋರ್ಟ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಗೌತಮ್ ಗಂಭೀರ್ ತಿಳಿಸಿದ್ದಾರೆ. ಅಲ್ಲದೆ, ಬಳಿಕ "ಕೋಚ್ ಸಾಹೇಬ್, ನಗು ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಒತ್ತಡದ ಜೊತೆಗೆ ನಗು ಸೇರಿಕೊಂಡರೆ ಅದೊಂದು ಅದ್ಭುತ ಕಾಂಬಿನೇಷನ್ ಆಗಿರುತ್ತದೆ. ನಿಮ್ಮದು ಅತ್ಯುತ್ತಮ ಸಾಧನೆ," ಎಂದು ಧೋನಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿ ಗೌತಮ್ ಗಂಭೀರ್ ಅವರು, "ನಗಲು ಇದಕ್ಕಿಂತ ದೊಡ್ಡ ಕಾರಣ ಇನ್ನೇನಿದೆ? ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು," ಎಂದು ಗಂಭೀರ್ ಹೇಳಿದರು. 2021ರ ಟಿ20 ವಿಶ್ವಕಪ್ ಸಮಯದಲ್ಲಿ ಎಂ.ಎಸ್. ಧೋನಿ ಅವರು ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸಪೋರ್ಟ್ ಸ್ಟಾಫ್ನಲ್ಲಿ ಅಲ್ಪಾವಧಿಯ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ 44ನೇ ವಯಸ್ಸಿನಲ್ಲೂ ಧೋನಿ ಐಪಿಎಲ್ನಲ್ಲಿ ಸಕ್ರಿಯರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮತ್ತೊಂದು ರೋಚಕ ಐಪಿಎಲ್ ಸೀಸನ್ಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಗೌತಮ್ ಗಮಭೀರ್ ಹಾಗೂ ಧೋನಿ ನಡುವೆ ನಡೆದ ಈ ಸಂಭಾಷನೆ ಮಾತ್ರ ಸಖತ್ ವೈರಲ್ ಆಗುತ್ತಿದೆ.