
ನವದೆಹಲಿ: ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡುವ ಬದಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಇಂಗ್ಲೆಂಡ್ ಕ್ರಿಕೆಟರ್ಸ್ ಆದ್ಯತೆ ನೀಡುತ್ತಿರುವುದು ಆಂಗ್ಲ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ಗೆ ಸರಿ ಕಾಣಿಸಿಲ್ಲ. ಹೀಗಾಗಿ ಜೆಫ್ರಿ ಅವರು ಆಂಗ್ಲ ಕ್ರಿಕೆಟಿಗರ ನಿಲುವಿನ ವಿರುದ್ಧ ಕಿಡಿ ಕಾರಿದ್ದಾರೆ.
ಜೂನ್ 2ರಿಂದ ಆರಂಭಗೊಳ್ಳಲಿದ್ದ ನ್ಯೂಜಿಲೆಂಡ್ ವಿರುದ್ಧ ಕೆಲ ಪಂದ್ಯಗಳಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಆಡದಿರುವ ಸಾದ್ಯತೆಯಿದೆ. ಯಾಕೆಂದರೆ ಅವರು ಐಪಿಎಲ್ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು iಇತ್ತೀಚೆಗೆ ಇಂಗ್ಲೆಂಡ್ ಮುಖ್ಯ ಕೋಚ್ ಕ್ರಿಸ್ ಸಿಲ್ವರ್ವುಡ್ ಹೇಳಿದ್ದರು. ಬಾಯ್ಕಾಟ್ಗೆ ಇಂಗ್ಲೆಂಡ್ ತಂಡದ ಈ ನಿಲುವು ಇಷ್ಟವಾಗಿಲ್ಲ.
ಡೈಲಿ ಟೆಲಿಗ್ರಾಫ್ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಬಾಯ್ಕಾಟ್, 'ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಡದ ಹೊರತಾಗಿ ಐಪಿಎಲ್ನಲ್ಲಿ ಆಡಲು ಅಂಗ್ಲ ಕ್ರಿಕೆಟಿಗರಿಗೆ ಕರೆ ಬರುತ್ತಿರಲಿಲ್ಲ ಅನ್ನೋದನ್ನು ಇಂಗ್ಲೆಂಡ್ ಕ್ರಿಕೆಟರ್ಸ್ ಮರೆಯುತ್ತಿರುವಂತಿದೆ. ಇಂಗ್ಲೆಂಡ್ ಕ್ರಿಕೆಟರ್ಸ್ ಇಂಗ್ಲೆಂಡ್ ತಂಡದ ಋಣದಲ್ಲಿದ್ದಾರೆ ಅನ್ನೋದನ್ನು ಅರಿತುಕೊಳ್ಳಬೇಕು,' ಎಂದು ಜೆಫ್ರಿ ಹೇಳಿದ್ದಾರೆ.
'ಇಂಗ್ಲೆಂಡ್ಗೆ ಕ್ರಿಕೆಟರ್ಸ್ ಯಾವತ್ತೂ ಮೊದಲ ಆದ್ಯತೆ ನೀಡಬೇಕು. ಅವರು ಹಣ ಗಳಿಸುವುದನ್ನು ನಿಲ್ಲಿಸಲಿ ಅಂತ ನಾನು ಹೇಳುತ್ತಿಲ್ಲ. ಆದರೆ ಅದಕ್ಕಾಗಿ ಇಂಗ್ಲೆಂಡ್ ತಂಡದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಾರದು,' ಎಂದು ಬೈಕಾಟ್ ಸಲಹೆ ನೀಡಿದ್ದಾರೆ.
ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವುದಕ್ಕೂ ಜೆಫ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರ ಸೋಲು ಕಂಡಿತ್ತು. ಅಂದ್ಹಾಗೆ, 2021ರ ಐಪಿಎಲ್ ಟೂರ್ನಿ ಏಪ್ರಿಲ್ 9ರಿಂದ ಮೇ 30ರವರೆಗೆ ನಡೆಯಲಿದೆ.