ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಸೋಲಿನಿಂದ ಪಾರು ಮಾಡಿದ್ದಾರೆ. ಇಂಗ್ಲೆಂಡ್ ಬೌಲರ್ಗಳ ಕೇಳತ್ತಿದ್ದ ಸತತ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಬ್ಯಾಟರ್ಗಳು ಕೆಚ್ಚೆದೆಯಿದ ಉತ್ತರ ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ. ಟೀಮ್ ಇಂಡಿಯಾದ ಆಲ್ರೌಂಡರ್ಸ್ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಂದ್ಯದ ಬಳಿಕ ಟೀಮ್ ಇಂಡಿಯಾದ ಆಲ್ರೌಂಡರ್ಸ್ ಆಟವನ್ನು ನಾಯಕ ಶುಭಮನ್ ಗಿಲ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಬೌಲರ್ಗಳನ್ನು ಮನ ಬಂದಂತೆ ಕಾಡಿದ್ದಾರೆ. ಟೀಮ್ ಇಂಡಿಯಾದ ಇಬ್ಬರು ಆಟಗಾರರು ಚಹಾ ವಿರಾಮದ ಬಳಿಕ ಬೆನ್ ಸ್ಟೋಕ್ಸ್ ಅವರಿಗೆ ಡ್ರಾಗಾಗಿ ಕೈ ಕುಲುಕುವುದನ್ನು ಏಕೆ ನಿರಾಕರಿಸಿದರು ಎಂಬ ಬಗ್ಗೆ ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ಶುಭಮನ್ ಗಿಲ್, ತಂಡದ ಬ್ಯಾಟರ್ಗಳು ನೀಡಿರುವ ಪ್ರದರ್ಶನ ನಿಜಕ್ಕೂ ನನಗೆ ಖುಷಿ ತಂದಿದೆ. ಕಳೆದ ಕೆಲವು ದಿನಗಳಿಂದ ತಂಡದ ಮೇಲೆ ಸಾಕಷ್ಟು ಒತ್ತಡವಿತ್ತು. ಐದನೇ ದಿನದಂದು ಪಿಚ್ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ನಮಗೆ ಅರಿವು ಇರಲಿಲ್ಲ. ಪ್ರತಿ ಚೆಂಡನ್ನು ಸಮರ್ಥವಾಗಿ ಎದುರಿಸುವ ಮೂಲಕ ಪಂದ್ಯವನ್ನು ಮತ್ತಷ್ಟು ಹತ್ತಿರಕ್ಕೆ ತೆಗೆದಕೊಂಡು ಹೋಗುವ ಇರಾದೆ ನಮ್ಮದಾಗಿತ್ತು ಎಂದು ಗಿಲ್ ಹೇಳಿದ್ದಾರೆ.
ಇನಿಂಗ್ಸ್ನ 138ನೇ ಓವರ್ ಬಳಿಕ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಡ್ರಾ ಮಾಡಿಕೊಳ್ಳಲು ಬಯಸಿದ್ದರು. ಅಲ್ಲದೆ ಟೀಮ್ ಇಂಡಿಯಾದ ಬ್ಯಾಟರ್ಗಳಿಗೆ ಕೈ ಕುಲುಕಲು ಹೋದರು. ಆದರೆ ಟೀಮ್ ಇಂಡಿಯಾದ ಬ್ಯಾಟರ್ಗಳು ಕೈ ಕುಲುಕಲಿಲ್ಲ. ಜಡೇಜಾ, ಸುಂದರ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ಅವರಿಬ್ಬರೂ ಶತಕಕ್ಕೆ ಅರ್ಹರು ಎಂದು ನಾಯಕ ಗಿಲ್ ತಿಳಿಸಿದ್ದಾರೆ. ಪ್ರತಿ ಟೆಸ್ಟ್ ನಿಂದ ಕಲಿಯಲು ಬಹಳಷ್ಟು ಇರುತ್ತದೆ. ನಾವು ಪ್ರತಿ ಪಂದ್ಯದಿದ ಹೊಸದನ್ನು ಕಲಿಯುತ್ತಿದ್ದೇವ. ಒಂದು ತಂಡವಾಗಿ, ಇದು ನಮಗೆ ಬಹಳಷ್ಟು ಕಲಿಸಿದೆ ಎಂದು ಗಿಲ್ ತಿಳಿಸಿದ್ದಾರೆ.

ಪ್ರತಿ ಪಂದ್ಯದ ಪ್ರತಿ ಇನಿಂಗ್ಸ್ನಲ್ಲೂ ನಾನು ಉತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ. ಅಲ್ಲದೆ ನನ್ನ ಬ್ಯಾಟಿಂಗ್ನ್ನು ನಾನು ಪೂರ್ಣವಾಗಿ ಆನಂದಿಸಲು ಬಯಸುತ್ತೇನೆ. ನಮ್ಮ ತಂಡ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಸ್ಕೋರ್ ಕಲೆ ಹಾಕಿತು. ಈ ವೇಳೆ ಬ್ಯಾಟರ್ಗಳು ಸಹ ಉತ್ತಮ ಆರಂಭವನ್ನು ಪಡೆದರು. ಆದರೆ ಇದನ್ನು ಬಿಗ್ ಸ್ಕೋರ್ ಆಗಿ ಕನ್ವರ್ಟ್ ಮಾಡಿಕೊಳ್ಳುವಲ್ಲಿ ವಿಫಲರಾದರು ಎಂದು ಗಿಲ್ ಹೇಳಿದ್ದಾರೆ.
ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಇಂಗ್ಲೆಂಡ್ ಸದ್ಯ 2-1 ರಿಂದ ಮುನ್ನಡೆ ಸಾಧಿಸಿದೆ.